ಚಕ್ರತೀರ್ಥ ನೇತೃತ್ವದ ಪಠ್ಯಪರಿಷ್ಕರಣೆ ವಿರೋಧಿಸಿ ಜು.17ಕ್ಕೆ ತಿಪಟೂರು ಚಲೋಗೆ ಕರೆ
ಶಿಕ್ಷಣ ಸಚಿವರ ಕ್ಷೇತ್ರದಲ್ಲಿ ಜಾಗೃತಿ ಮೂಡಿಸಲು ಕುವೆಂಪು ಹೋರಾಟ ಸಮಿತಿ ನಿರ್ಧಾರ
ರೋಹಿತ್ ಚಕ್ರತೀರ್ಥ | ಶಿಕ್ಷಣ ಸಚಿವ ಬಿ.ಸಿ. ನಾಗೇಶ್
ಬೆಂಗಳೂರು, ಜು.14: ರೋಹಿತ್ ಚಕ್ರತೀರ್ಥ ಅವರ ಪಠ್ಯಪರಿಷ್ಕರಣೆ ವಿರೋಧಿಸಿ, ಜು.17ರಂದು ತಿಪಟೂರು ಚಲೋ ಜನಜಾಗೃತಿ ಪಾದಯಾತ್ರೆಗೆ ವಿಶ್ವ ಮಾನವ ಕ್ರಾಂತಿಕಾರಿ ಕುವೆಂಪು ಹೋರಾಟ ಸಮಿತಿ ಮತ್ತು ಜಾಗೃತ ತಿಪಟೂರು ಬಳಗ ಕರೆ ನೀಡಿದೆ.
ಗುರುವಾರ ಪ್ರೆಸ್ಕ್ಲಬ್ನಲ್ಲಿ ಸಾಹಿತಿ ಎಲ್.ಎಲ್. ಮುಕುಂದ್ರಾಜ್ ಮಾತನಾಡಿ, ಈಗಾಗಲೇ ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ಅವೈಜ್ಞಾನಿಕವಾಗಿ ಪಠ್ಯಪರಿಷ್ಕರಣೆಯನ್ನು ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಯಾವುದೇ ಕ್ರಮವನ್ನು ಜರುಗಿಸದೆ ಹಠ ಸಾಧಿಸುತ್ತಿದ್ದಾರೆ. ಹಾಗಾಗಿ ಎಲ್ಲ ಜಿಲ್ಲೆಗಳಿಂದ ಶಿಕ್ಷಣ ಸಚಿವರ ಕ್ಷೇತ್ರ ತಿಪಟೂರಿಗೆ ಹೋಗಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ರೋಹಿತ್ ಚಕ್ರವರ್ತಿ ಅವರ ಪಠ್ಯವನ್ನು ಬಿಟ್ಟು, ಹಳೆಯ ಪುಸ್ತಕವನ್ನು ಮಕ್ಕಳಿಗೆ ನೀಡಬೇಕು. ನಾಡಗೀತೆ, ನಾಡಧ್ವಜವನ್ನು ಅವಮಾನ ಮಾಡಿದ ಚಕ್ರತೀರ್ಥ ಅವರನ್ನು ಬಂದಿಸಬೇಕು. ಬಿ.ಸಿ.ನಾಗೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಕುರಿತು ತಿಪಟೂರು ಸೇರಿ ಸುತ್ತಮುತ್ತಲಿನ ಎಲ್ಲಾ ಹೋರಾಟಗಾರರು ಸೇರಿ ಬಹಿರಂಗ ಸಭೆ ನಡೆಸಲಿದ್ದೇವೆ ಮಾಹಿತಿ ನೀಡಿದರು.