ವಿಶ್ವಾಸ ಇಲ್ಲಾಂದ್ರೆ ತಗೊಂಡು ಹೋಗು: ಸೆಲ್ಫಿಗೆ ಮುಂದಾದ ಪ್ರತಾಪ್ ಸಿಂಹ ವಿರುದ್ಧ ಸಿಎಂ ಬೊಮ್ಮಾಯಿ ಸಿಡಿಮಿಡಿ
ಬೆಂಗಳೂರು, ಜು.20: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿರುವ ಟಿವಿ ಚಾನೆಲ್ ಒಂದರ ವಿಡಿಯೋ ಸದ್ಯ ವೈರಲ್ ಆಗಿದೆ.
ನಿನ್ನೆ(ಮಂಗಳವಾರ ) ವಿಧಾನಸೌಧದ 3ನೇ ಮಹಡಿಯ ಕೊಠಡಿ ಸಂಖ್ಯೆ334ರಲ್ಲಿ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಅಧಕಾರಿಗಳು, ಜನಪ್ರತಿನಿಧಿಗಳ ಜೊತೆಗೆ ಸಂಸದ ಪ್ರತಾಪ್ ಸಿಂಹ ಕೂಡ ಭಾಗವಹಿಸಿದ್ದರು. ಸಭೆ ಬಳಿಕ ತನ್ನ ಕ್ಷೇತ್ರಕ್ಕೆ ಸಂಬಂಧಪಟ್ಟ ಪತ್ರ ಹಾಗೂ ದಾಖಲೆಯೊಂದನ್ನು ಸಿಎಂ ಬೊಮ್ಮಾಯಿಗೆ ಪ್ರತಾಪ್ ಸಿಂಹ ನೀಡಿದ ಬಳಿಕ ನಿಮ್ಮ ಜೊತೆ ಒಂದು ಪೋಟೋ ತಗೋತೀನಿ ಎಂದು ಹೇಳಿದ್ದಾರೆ. ಇದಕ್ಕೆ ಕೋಪಗೊಂಡಿರುವ ಬೊಮ್ಮಾಯಿ, 'ನನ್ ಜೊತೆ ಫೋಟೊ ಬೇಡ, ಅತಿ ಬುದ್ಧಿವಂತರ ಜೊತೆ ಕೆಲಸ ಮಾಡೋದೆ ಕಷ್ಟ, ವಿಶ್ವಾಸ ಇಲ್ಲಾಂದ್ರೆ ಇದನ್ನು ವಾಪಸ್ ತಗೊಂಡು ಹೋಗು' ಎಂದು ಗುಡುಗಿದ್ದಾರೆ.
ಮುಖ್ಯಮಂತ್ರಿಯವರ ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆ ಸಿಎಂ ಅವರ ಹಿಂದಿನಿಂದ ಹೋದ ಪ್ರತಾಪ್ ಸಿಂಹ ಮತ್ತೆ ಪೇಪರ್ ಹಿಡಿದು ಕೇಳಿಕೊಂಡಿದ್ದರೂ ಬೊಮ್ಮಾಯಿ ಅವರು ಮಾತನಾಡಿಸದೇ ಹೊರಟು ಹೋಗಿದ್ದಾರೆ.
ಪ್ರತಾಪ್ ಸಿಂಹ ಹಾಗೂ ಮುಖ್ಯಮಂತ್ರಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಪೋಸ್ಟ್ ಮಾಡಿ ಪ್ರತಾಪ್ ಸಿಂಹ ಅವರ ವಿರುದ್ಧ ವ್ಯಂಗ್ಯವಾಡುತ್ತಿದ್ದಾರೆ.