ಆರೋಪ ಸಾಬೀತು ಪಡಿಸದಿದ್ದರೆ ಕ್ರಮಿನಲ್ ಕೇಸ್: ಸಚಿವ ಅಶ್ವತ್ಥನಾರಾಯಣ ಎಚ್ಚರಿಕೆ
ಬೆಂಗಳೂರು, ಜು.23: ಕೆಪಿಸಿಸಿ ಉಪಾಧ್ಯಕ್ಷ ರಮೇಶ್ ಬಾಬು ನನ್ನ ವಿರುದ್ಧ ಮಾಡಿರುವ ಆರೋಪಗಳಲ್ಲಿ ಕಿಂಚಿತ್ತೂ ಹುರುಳಿಲ್ಲ. ಇವುಗಳನ್ನು ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಕಾಂಗ್ರೆಸ್ಸಿನವರಿಗೆ ದಿನ ಬೆಳಗಾದರೆ ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವುದೇ ಕಸುಬಾಗಿದೆ. ಮುಕ್ತ ವಿ.ವಿ.ಗೆ ವಿದ್ಯಾಶಂಕರ್ ಅವರು ಕುಲಪತಿಯಾಗಿ ನೇಮಕವಾಗಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ. ಈ ಕನಿಷ್ಠ ಪರಿಜ್ಞಾನವೂ ಇಲ್ಲದೆ ಬಾಯಿಗೆ ಬಂದಂತೆ ಮಾತನಾಡಿರುವುದು ಅಕ್ಷಮ್ಯ. ಅಲ್ಲದೆ, ವಿ.ವಿ.ಯ ಹಣವನ್ನು ನಿಯಮಗಳ ಪ್ರಕಾರ ಎಲ್ಲಿಗೂ ವರ್ಗಾಯಿಸಲು ಸಾಧ್ಯವಿಲ್ಲ. ಮುಕ್ತ ವಿ.ವಿ.ಯು ಹಲವು ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಂಡು, ಪರೀಕ್ಷೆ ನಡೆಸಲು ಅದಕ್ಕೆ ಸ್ವಾಯತ್ತತೆ ಇದೆ.
ನಾನು ಉನ್ನತ ಶಿಕ್ಷಣ ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಶೈಕ್ಷಣಿಕ ಸ್ವಾಯತ್ತೆಗಳನ್ನು ತಂದಿದ್ದೇನೆ. ನನ್ನ ವಿರುದ್ಧ ಮಾತನಾಡುವವರಿಗೆ ಇದರ ಅರಿವಿರಬೇಕು ಎಂದು ತಿಳಿಸಿದರು.