ಈ.ಡಿ ವಿಚಾರಣೆ; ನನ್ನನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದ ಡಿ.ಕೆ.ಶಿವಕುಮಾರ್
ಬೆಂಗಳೂರು, ಜು.28: ನನ್ನನ್ನು ಸಿಲುಕಿಸಲು ಹಲವರು ಪ್ರಯತ್ನಿಸುತ್ತಿದ್ದಾರೆ. ಇದೇ 30 ರಂದು ಈ.ಡಿ ವಿಚಾರಣೆ ಇದ್ದು, ನಾನು ನಾಳೆ ದಿಲ್ಲಿಗೆ ತೆರಳುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಚನ್ನಪಟ್ಟಣದ ಗೌಡಗೆರೆಯ ಚಾಮುಂಡೇಶ್ವರಿ ದೇವಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಾನು ತಪ್ಪು ಮಾಡಿಲ್ಲ ಎಂದರೆ ಈ ತಾಯಿ ನನ್ನನ್ನು ರಕ್ಷಿಸುತ್ತಾಳೆ. ಕೆಲವರು ಏನೇನೋ ಆಸೆ ಪಡುತ್ತಿದ್ದಾರೆ. ನನ್ನನ್ನು ಸಿಲುಕಿಸಲು ಏನೇನೋ ಸಂಚು ಮಾಡುತ್ತಿದ್ದಾರೆ. ಆ ಬಗ್ಗೆ ನಿಧಾನವಾಗಿ ಮಾತನಾಡುತ್ತೇನೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನೇ ಬಿಡುತ್ತಿಲ್ಲ. ಇನ್ನು ನನ್ನನ್ನು ಬಿಡುತ್ತಾರೆಯೇ? ಎಂದು ಅವರು ಹೇಳಿದರು.
ದೇವಿಯಲ್ಲಿ ಏನು ಕೇಳಿಕೊಂಡಿರಿ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕೆಲವರು ನನಗೆ ಮಾಡುತ್ತಿರುವ ತೊಂದರೆ ದೂರ ಮಾಡು. ಎಲ್ಲರ ದುಃಖ ದೂರ ಮಾಡು, ಈ ಭಾಗದ ಜನರಿಗೆ ನೆಮ್ಮದಿ ಶಾಂತಿ ಸಿಗಲಿ. ಒಳ್ಳೆಯ ಮಳೆ, ಬೆಳೆ ಹಾಗೂ ಜ್ಞಾನ ಸಿಗಲಿ. ಯಾರಿಗೂ ಅನ್ಯಾಯ ಆಗಬಾರದು, ನ್ಯಾಯ ದೊರಕಿಸಿ ಕೊಡು ಎಂದು ಪ್ರಾರ್ಥಿಸಿದೆ ಎಂದರು.