ಕಲಬುರಗಿ: ಬಿಇಒ ಮೇಲೆ ಶಿಕ್ಷಕನಿಂದ ಗಂಭೀರ ಹಲ್ಲೆ; ಆರೋಪಿ ಬಂಧನ
ಕಲಬುರಗಿ: ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನೊಬ್ಬ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ್ ಎಂಬವರಿಗೆ ಮೇಲೆ ಹಲ್ಲೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಚಿತ್ತಾಪುರ ತಾಲೂಕಿನ ದೇವಾಜಿ ನಾಯಕ್ ತಾಂಡಾದ ಸ.ಕಿ.ಪ್ರಾ.ಶಾಲೆಯ ಶಿಕ್ಷಕ ಮಲ್ಲಿನಾಥ ಹಲ್ಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.
ಬುಧವಾರ ರಾತ್ರಿ ಬಿಇಒ ಮನೆಗೆ ನುಗ್ಗಿ ಬಕೆಟ್ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳಿಂದ ತಲೆಗೆ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆ ಮಾಡಿದ ಶಿಕ್ಷಕ ಶಾಲೆಗೆ ಹಾಜರಾಗದೇ ಇರುವ ಕಾರಣ ಸಂಬಳ ತಡೆ ಹಿಡಿಯಲಾಗಿದ್ದು ಇದರಿಂದ ಕುಪಿತಗೊಂಡ ಶಿಕ್ಷಕ ಕ್ಷೇತ್ರ ಶಿಕ್ಷಣಾಧಿಕಾರಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿದ ಶಿಕ್ಷಕ ಮಲ್ಲಿನಾಥನನ್ನು ಪೊಲೀಸರು ಬಂಧಿಸಿದ್ದಾರೆ.
Next Story