ಸರಕಾರದ ಅಭಿವೃದ್ಧಿಯ ವೇಗ ಹೆಚ್ಚಿಸುವ ಅಗತ್ಯವಿದೆ: ಶಾಸಕ ಯತ್ನಾಳ್
ವಿಜಯಪುರ: ‘ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಇನ್ನೂ ವೇಗವಾಗಿ ನಡೆಯಬೇಕೆಂಬ ಆಸೆ ಎಲ್ಲರಿಗೂ ಇದೆ. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಇನ್ನೂ ಕ್ರಿಯಾಶೀಲವಾಗಬೇಕು. ಅಭಿವೃದ್ದಿಗೆ ಹೆಚ್ಚಿನ ವೇಗ ನೀಡಬೇಕು. ಕಠಿಣ ಕ್ರಮ ಕೈಗೊಳ್ಳುವುದು ಕೇವಲ ಬಾಯಿ ಮಾತಿನಲ್ಲಿ ಆಗಬಾರದು' ಎಂದು ವಿಜಯಪುರ ನಗರ ಬಿಜೆಪಿ(BJP) ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕೆಲವರಿಗೆ ಇತಿಹಾಸದ ಬಗ್ಗೆ ಮಾಹಿತಿ ಇರುವುದಿಲ್ಲ. ಎರಡು ಬಾರಿ ಅತ್ಯಂತ ಕಠಿಣ ಕಾಲಪಾನಿ ಶಿಕ್ಷೆಯನ್ನು ಅನುಭವಿಸಿದ ಸಾವರ್ಕರ್ ಬಗ್ಗೆ ಆಕ್ಷೇಪಿಸುವವರು ಒಮ್ಮೆ ಅಂಡಮಾನ್ ನಿಕೋಬಾರ್ ಜೈಲಿಗೆ ಹೋದರೆ ಗೊತ್ತಾಗುತ್ತದೆ. ಅಲ್ಲಿನ ಸ್ಥಿತಿ ಹೇಗಿರುತ್ತದೆ' ಎಂದು ವಾಗ್ದಾಳಿ ನಡೆಸಿದರು.
‘ಕೆಲವರು ಅಪ್ರಬುದ್ಧರಿರುತ್ತಾರೆ, ಅವರಿಗೆ ಏನು ಬಗ್ಗೆ ಗೊತ್ತಿರುವುದಿಲ್ಲ. ಇತಿಹಾಸ ನೆನಪಿಸಿಕೊಡಲು ಪ್ರಧಾನಿ ಮೋದಿ ಮಾಡುತ್ತಿರುವುದು ಶ್ಲಾಘನೀಯ ಕೆಲಸ. ಒಂದು ವೇಳೆ ರಾಹುಲ್ ಗಾಂಧಿ, ಸಾವರ್ಕರ್ ರೀತಿಯಲ್ಲಿ ಇದ್ದಿದ್ದರೆ, ಒಂದೇ ತಾಸಿನಲ್ಲಿ ಶರಣಾಗಿ ಇಟಲಿಗೆ ಹೋಗುತ್ತಿದ್ದರು' ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದರು.
‘ಯಡಿಯೂರಪ್ಪನವರು ರಾಜ್ಯ ಪ್ರವಾಸ ಮಾಡಲಿ ಬಿಡಿ. ರಾಜ್ಯಾದ್ಯಂತ ಬೇಕಾದರೂ ಓಡಾಡಲಿ, ಮನೇಲಿ ಬೇಕಾದರೂ ಓಡಾಡಲಿ. ಯಾರು ಓಡಾಡಬೇಕೆಂಬುದನ್ನು ಪಕ್ಷದ ವರಿಷ್ಟರು ನಿರ್ಧಾರ ಮಾಡುತ್ತಾರೆ' ಎಂದ ಅವರು, ಸಿದ್ದರಾಮಯ್ಯ ಅವರೊಬ್ಬ ಹಿರಿಯ ನಾಯಕರು. ಅವರು ಸ್ವಾತಂತ್ರ್ಯ ಹೋರಾಟದ ಬಗ್ಗೆ ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಬೇಕು' ಎಂದು ಇದೇ ವೇಳೆ ಸಲಹೆ ನೀಡಿದರು.
ಇದನ್ನೂ ಓದಿ: ಪಾಕಿಸ್ತಾನಕ್ಕಾಗಿ ಗೂಢಚರ್ಯೆ ನಡೆಸುತ್ತಿದ್ದ ನಾರಾಯಣ ಲಾಲ್, ಕುಲ್ದೀಪ್ ಸಿಂಗ್ ಬಂಧನ