VIDEO | ಮೊಟ್ಟೆ ಎಸೆತ ಪ್ರಕರಣ: ವಿಧಾನಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ
ಅಗತ್ಯ ಬಿದ್ದರೆ ನಾಳೆಯೇ ಕೊಡಗಿಗೆ ಬರಲು ಸಿದ್ಧನಿದ್ದೇನೆ ಎಂದ ಸಿದ್ದರಾಮಯ್ಯ
ಬೆಂಗಳೂರು, ಸೆ.13: ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಅನಾಹುತ ವೀಕ್ಷಿಸಲು ತೆರಳಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶಿಸಿ, ಅವರ ವಾಹನದ ಮೇಲೆ ಮೊಟ್ಟೆ ಎಸೆದ ಪ್ರಕರಣವು ವಿಧಾನಸಭೆಯಲ್ಲಿ ಪ್ರಸ್ತಾಪಗೊಂಡು, ಕೆಲಕಾಲ ಆಡಳಿತರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರ ನಡುವೆ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿತ್ತು.
ಮಂಗಳವಾರ ಭೋಜನ ವಿರಾಮದ ಬಳಿಕ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿರುವಾಗ ತಾನು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನನ್ನ ವಾಹನದ ಮೇಲೆ ಮೊಟ್ಟೆ, ಕಲ್ಲು ಎಸೆದಿದ್ದರು. ಈ ಸಂದರ್ಭದಲ್ಲಿ ಪೊಲೀಸರು ನಿಷ್ಕ್ರಿಯವಾಗಿ ನಿಂತಿದ್ದರು ಎಂದು ಕಿಡಿಗಾರಿದರು.
ಕೊಡಗು ಜಿಲ್ಲಾಧಿಕಾರಿ ಕಚೇರಿ ಬಳಿ 7.50 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ತಡೆಗೋಡೆಯೊಂದು ಕಳಪೆ ಕಾಮಗಾರಿಯಿಂದ ಕೂಡಿದ್ದು ಬೀಳುವ ಹಂತದಲ್ಲಿದೆ. ಅದನ್ನು ನೋಡಲು ನಾನು ಹೋದರೆ, ಅದನ್ನು ನೋಡಬಾರದೆಂದು ಕಪ್ಪು ಬಾವುಟ ಪ್ರದರ್ಶಿಸಿ, ಮೊಟ್ಟೆ ಎಸೆದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, ಮಾಧ್ಯಮಗಳಲ್ಲಿ ಇದಕ್ಕೆ ಬೇರೆ ಏನೋ ಕಾರಣ ಎಂದು ವರದಿಗಳು ಬಂದಿದ್ದವು ಎಂದರು.
ಆಗ ಬಿಜೆಪಿ ಸದಸ್ಯ ಅಪ್ಪಚ್ಚು ರಂಜನ್ ಮಧ್ಯಪ್ರವೇಶಿಸಿ, ಮೊಟ್ಟೆ ಎಸೆಯುವುದನ್ನು ನಾವು ಸಮರ್ಥಿಸುವುದಿಲ್ಲ. ಆದರೆ, ಮೊಟ್ಟೆ ಹೊಡೆದದ್ದು ನಿಮ್ಮ ಪಕ್ಷದವರು ಎಂದರು. ಇದಕ್ಕೆ ಆಕ್ರೋಶಗೊಂಡು ಅವರ ವಿರುದ್ಧ ಮುಗಿಬಿದ್ದ ಕಾಂಗ್ರೆಸ್ ಸದಸ್ಯರು, ಮೊಟ್ಟೆ ಹೊಡೆದದ್ದು ನಮ್ಮ ಪಕ್ಷದವರಾಗಿದ್ದರೆ ನೀವು ಯಾಕೆ ಹೋಗಿ ಅವರನ್ನು ಬಿಡಿಸಿಕೊಂಡು ಬಂದದ್ದು ಎಂದು ಕಿಡಿಗಾರಿದರು.
ನಂತರ ಮಾತು ಮುಂದುವರೆಸಿದ ಸಿದ್ದರಾಮಯ್ಯ, ಅಪ್ಪಚ್ಚು ರಂಜನ್ ಅವರೇ ಇದನ್ನು ಮಾಡಿಸಿದ್ದು, ನನಗೆ ಇದರ 10ರಷ್ಟು ಮಾಡಲು ಬರುತ್ತೆ. ನೀವೇನು ಕೊಡಗಿಗೆ ಪಾಳೆಗಾರರೇ? ಇಂತಹ ಗೊಡ್ಡು ಬೆದರಿಕೆಗಳಿಗೆಲ್ಲ ಹೆದರುವ ಮಕ್ಕಳಲ್ಲ ನಾವು. ಮೊಟ್ಟೆ ಎಸೆಯುತ್ತಿದ್ದಂತೆ ನೀವೇನು ಶೂರರು, ವೀರರು ಆಗುತ್ತೀರಾ? ನಾನು ಬಯಸಿದರೆ ಇಡೀ ರಾಜ್ಯದಲ್ಲಿ ಬೇಕಾದರೆ ಮೊಟ್ಟೆ ಹೊಡೆಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಿಪ್ಪು ಸುಲ್ತಾನ್ ಜಯಂತಿ ಆಚರಣೆ,ಸಾವರ್ಕರ್ ಬಗ್ಗೆ ಮಾತನಾಡಿದ್ದಕ್ಕಾಗಿ ಕೊಡಗಿನ ಜನ ನಿಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಎಂದು ಬಿಜೆಪಿ ಸದಸ್ಯ ಕೆ.ಜಿ.ಬೋಪಯ್ಯ ಹೇಳಿದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಟಿಪ್ಪು ಸುಲ್ತಾನ್ ಅವರ ಪುಸ್ತಕಕ್ಕೆ ಮುನ್ನಡಿ ಬರೆದದ್ದು ಯಾರು? ಟಿಪ್ಪು ಪೇಟ ಧರಿಸಿ, ಕೈಯಲ್ಲಿ ಖಡ್ಗ ಹಿಡಿದುಕೊಂಡು ಫೋಸ್ ಕೊಟ್ಟಿದ್ದು
ಯಾರು? ಬಿಜೆಪಿಯ ಮುಖ್ಯಮಂತ್ರಿಗಳೆ ಅಲ್ಲವೇ? ಎಂದರು. ಕೊಡಗಿನ ಜನ ಒಳ್ಳೆಯವರು, ಈ ಇಬ್ಬರು ಶಾಸಕರ ನಡವಳಿಕೆಯಿಂದ ಕೊಡಗಿನ ಗೌರವ ಹಾಳಾಗುತ್ತಿದೆ. ಅಭಿವೃದ್ಧಿ ಕುಸಿದಿದೆ. ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಧಮ್ ಇದ್ದರೆ ಕೊಡಗಿಗೆ ಬನ್ನಿ ಎಂದು ಸವಾಲು ಹಾಕಿದ್ದರು. ಕೆಲವು ವರ್ಷಗಳ ಹಿಂದೆ ಇದೇ ಸದನದಲ್ಲಿ ಜನಾರ್ದನ ರೆಡ್ಡಿ ಹಾಗೂ ಇತರರು ತಾಕತ್ ಇದ್ದರೆ ಬಳ್ಳಾರಿಗೆ ಬನ್ನಿ ಎಂದಿದ್ದರು. ಈಗ ನೀವು ಸವಾಲು ಹಾಕಿದ್ದೀರಾ. ಅಗತ್ಯ ಬಿದ್ದರೆ ನಾಳೆಯೆ ಕೊಡಗಿಗೆ ಬರಲು ಸಿದ್ಧನಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.