ಮಡಿಕೇರಿ: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದ ಸಹಕಾರ ಸಂಘಗಳ ಹಿರಿಯ ನಿರೀಕ್ಷಕ
ಮಡಿಕೇರಿ ಸೆ.16 : ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಹಿರಿಯ ನಿರೀಕ್ಷಕರೊಬ್ಬರು ಲಂಚ ಸ್ವೀಕರಿಸುತ್ತಿದ್ದ ಆರೋಪದಡಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ನಗರದ ಬಾಲಭವನದ ಬಳಿ ಇರುವ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ನಿರೀಕ್ಷಕ ಮಂಜುನಾಥ್ ಅವರನ್ನು ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ
ನಗರದ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಕಕ್ಕಬ್ಬೆಯ ನಿವಾಸಿ ದೇವಯ್ಯ ಎಂಬುವವರು ಹೊರ ಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೊರ ಗುತ್ತಿಗೆ ನೌಕರರ ಸಂಘದ ನೋಂದಣಿಗೆ ಮುಂದಾದ ಸಂದರ್ಭ ಸಹಕಾರ ಇಲಾಖೆ ಉಪ ನಿಬಂಧಕರ ಕಚೇರಿಯ ಹಿರಿಯ ನಿರೀಕ್ಷಕ ಮಂಜುನಾಥ್ 9 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇದರಿಂದ ನೊಂದ ದೇವಯ್ಯ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಶುಕ್ರವಾರ ದೇವಯ್ಯರಿಂದ 8 ಸಾವಿರ ರೂ. ಹಣ ಸ್ವೀಕರಿಸುತ್ತಿದ್ದ ಸಂದರ್ಭ ಕೊಡಗು ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಮಂಜುನಾಥ್ ಅವರನ್ನು ಹಣ ಸಹಿತ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಮೈಸೂರು ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಕೊಡಗು ಲೋಕಾಯುಕ್ತ ಡಿವೈಎಸ್ಪಿ ಪವನ್, ನಿರೀಕ್ಷಕ ಲೋಕೇಶ್, ಹೆಡ್ಕಾನ್ಸ್ಟೇಬಲ್ ಗಳಾದ ಲೋಕೇಶ್, ಮಂಜುನಾಥ್, ಕಾನ್ಸ್ಟೇಬಲ್ ಗಳಾದ ಪೃತ್ವೇಶ್, ಸಲಾವುದ್ದೀನ್, ಎ.ಹೆಚ್.ಸಿ.ಗಳಾದ ಅರುಣ್, ಶಶಿ ಅವರುಗಳು ಕಾರ್ಯಾಚರಣೆ ನಡೆಸಿದರು.