ಚುನಾವಣೆಯಲ್ಲಿ ಗೆಲ್ಲಿಸಿ ನಾವು ತಪ್ಪು ಮಾಡಿದ್ದೇವೆ: ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ನಾಯಕರ ಅಸಮಾಧಾನ
ಶಿವಮೊಗ್ಗ: ಸೊರಬ ವಿಧಾನ ಸಭಾ ಕ್ಷೇತ್ರದ ಶಾಸಕ ಕುಮಾರ ಬಂಗಾರಪ್ಪನವರ ವಿರುದ್ಧ ಬಿಜೆಪಿ ಪಕ್ಷದವರೇ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರ ಹಾಕಿದ ಘಟನೆ ನಡೆದಿದೆ.
ಕುಮಾರ್ ಬಂಗಾರಪ್ಪನವರನ್ನು ಗೆಲ್ಲಿಸಿ ನಾವು ತಪ್ಪು ಮಾಡಿದ್ವಿ ಎಂದು ಬಿಜೆಪಿಯ ಹಿರಿಯ ಮುಖಂಡ ಪದ್ಮನಾಭ್ ಭಟ್ ಸೊರಬದಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಅಂಗವಾಗಿ ನಮೋ ವೇದಿಕೆಯಿಂದ ಬೈಕ್ ರ್ಯಾಲಿ ನಡೆಸಿದ ಮೂಲ ಬಿಜೆಪಿಗರು ಗಿರಿಜಾ ಶಂಕರ ಸಭಾಭವನದಲ್ಲಿ ಪ್ರತ್ಯೇಕ ಕಾರ್ಯಕ್ರಮ ನಡೆಸಿದರು.
ಈ ವೇಳೆ ಮಾತನಾಡಿದ ತಾಲೂಕಿನ ಹಿರಿಯ ಬಿಜೆಪಿ ಮುಖಂಡ ಪದ್ಮನಾಭ್ ಭಟ್, 'ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಹರಿಹಾಯ್ದಿದ್ದಾರೆ. ಕುಮಾರ್ ಬಂಗಾರಪ್ಪ ತಮ್ಮ ಹೆತ್ತವರಾದ ಬಂಗಾರಪ್ಪ ಹಾಗೂ ಶಕುಂತಲ ಬಂಗಾರಪ್ಪನವರನ್ನು ಉಟ್ಟ ಬಟ್ಟೆಯಲ್ಲೆ ಮಧ್ಯರಾತ್ರಿ ಮನೆಯಿಂದ ಹೊರ ಹಾಕಿದ್ದರು. ಹೀಗೆ ಹೆತ್ತವರನ್ನು ಮನೆಯಿಂದ ಹೊರ ಹಾಕಿದವರು ಕಾರ್ಯಕರ್ತರನ್ನು ಹೇಗೆ ನೋಡಿ ಕೊಳ್ಳುತ್ತಾರೆ' ಎಂದು ಕಿಡಿಕಾರಿದ್ದಾರೆ.
'ಪಕ್ಷದ ಹಿರಿಯರು ಟಿಕೆಟ್ ಕೊಟ್ಟರು ನಾವು ಗೆಲ್ಲಿಸಿದ್ದೆವು. ಅದಕ್ಕೆ ಶಾಸಕರು ನಮಗೆ ಈ ರೀತಿ ಮಾಡುತ್ತಿದ್ದಾರೆ' ಎಂದು ತೀವ್ರ ಆಕ್ರೋಶ ಹೊರ ಹಾಕಿದರು.
'ಜಿಲ್ಲೆಯ ಪ್ರಾಮಾಣಿಕ, ದಿಟ್ಟ ನಾಯಕ ಕಾಗೋಡು ತಿಮ್ಮಪ್ಪ.ಅವರು ಕಾಂಗ್ರೆಸ್ ಪಕ್ಷದಲ್ಲಿರಬಹುದು ಆದರೆ ಎಲ್ಲರನ್ನೂ ಗೌರವದಿಂದ ಕಾಣುತ್ತಾರೆ.ರಾಜಕೀಯದಲ್ಲಿ ಯಾರು ಗೌರವದಿಂದ ಕಾಣುತ್ತಾರೋ ಅವರನ್ನು ಗೌರವಿಸಿವುದು ನಮ್ಮ ಕರ್ತವ್ಯ' ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿಯ ಹಲವು ಮುಖಂಡರು ಹಾಜರಿದ್ದರು.