ಮೈಸೂರು | ಮುಕ್ತ ವಿವಿ ಕುಲಪತಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಆಡಿಯೋ ಬಿಡುಗಡೆ ಮಾಡಿದವರ ಮೇಲೆ ಹಲ್ಲೆಗೆ ಯತ್ನ
ಮೈಸೂರು,ಸೆ.27: ಕರ್ನಾಟಕ ಮುಕ್ತ ವಿವಿ ಕುಲಪತಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಕೆ.ಮಹದೇವ್ ಹಾಗೂ ವಿಶ್ರಾಂತ ಕುಲಪತಿ ಡಾ.ರಾಮೇಗೌಡ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿರುವ ವೇಳೆ ವ್ಯಕ್ತಿಯೊಬ್ಬ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ಕೆಎಸ್ಓ ಕುಲಪತಿ ಡಾ.ವಿದ್ಯಾಶಂಕರ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆಂದು ಮೈಸೂರು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಕೆ ಮಹದೇವ್ ಕುಲಪತಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಇಂದು ದಾಖಲೆಗಳನ್ನ ಬಿಡುಗಡೆ ಮಾಡಲು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಡಾ.ಕೆ.ಮಹದೇವ್ ಮೇಲೆ ಮಂಡ್ಯದ ರೀಜಿನಲ್ ಡೈರೆಕ್ಟರ್ ಸುಧಾಕರ್ ಹೊಸಳ್ಳಿ ಎಂಬವರು ಹಲ್ಲೆಗೆ ಯತ್ನಿಸಿದ್ದು, ಈ ಸಂಬಂಧ ದೂರು ದಾಖಲಾಗಿದೆ.
ಬಳಿಕ ಮಾತನಾಡಿದ ಡಾ.ಕೆ.ಮಹದೇವ್, ಕೆಎಸ್ಒಯು ಕುಲಪತಿ ಡಾ.ವಿದ್ಯಾಶಂಕರ್ ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಯೊಬ್ಬರಿಗೆ ಹಣದ ಆಮಿಷ ತೋರಿಸಿ ಅವರೊಂದಿಗೆ ಸಲುಗೆಯಿಂದ ಮಾತನಾಡಿ ಆ ಸಂಸಾರವನ್ನೇ ಹಾಳುಮಾಡಿದ್ದಾರೆ. ವಿಚಾರ ಗೊತ್ತಾಗಿ ಆಕೆಯ ಪತಿ ಡಾ.ವಿದ್ಯಾಶಂಕರ್ ಅವರಿಗೆ ದೂರವಾಣಿಯಲ್ಲಿ ಬೈದಿದ್ದಾರೆ. ಡಾ.ವಿದ್ಯಾಶಂಕರ್ ಒಬ್ಬ ಭ್ರಷ್ಟ ಮತ್ತು ವಂಚಕ, ಆತನ ಬಗ್ಗೆ ಸಾಕ್ಷಿ ನೀಡಿ ಎಂದು ಮಾಧ್ಯಮದವರು ಕೇಳುತ್ತಿದ್ದಿರಿ ಅದಕ್ಕೆ ಈ ಆಡಿಯೋ ಬಿಡುಗಡೆ ಮಾಡುತ್ತಿದ್ದೇನೆ. ಇನ್ನು ಈತನ ಬಗ್ಗೆ ಹಲಾವಾರು ಆರೋಪಗಳಿದ್ದು ಎಲ್ಲವನ್ನು ಸಾಕ್ಷಿ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಪತ್ರಕರ್ತರ ಸಂಘದಲ್ಲಿ ನಡೆದ ಈ ಘಟನೆಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸುಧಾಕರ್ ಹೊಸಹಳ್ಳಿ ವಿರುದ್ಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದೆ ಎಂದು ತಿಳಿದು ಬಂದಿದೆ.