ಮದುಮಗ ಧರಿಸಬೇಕಿದ್ದ ಬಟ್ಟೆ ಕಳೆದುಹೋಗಲು ಕಾರಣವಾಗಿದ್ದ ಕೊರಿಯರ್ ಕಂಪೆನಿಗೆ ಕೋರ್ಟ್ ದಂಡ
ಬೆಂಗಳೂರು: ಮದುವೆಯ ದಿನದಂದು ವರ ಧರಿಸಬೇಕಿದ್ದ ಬಟ್ಟೆ ಕಳೆದುಹೋಗಲು ಕಾರಣವಾಗಿದ್ದ ಪ್ರತಿಷ್ಠಿತ ಕೊರಿಯರ್(courier) ಕಂಪೆನಿಗೆ ಗ್ರಾಹಕರ ಕೋರ್ಟ್, 25 ಸಾವಿರ ದಂಡ ವಿಧಿಸಿ, ಬಟ್ಟೆಯ ಮೊತ್ತದೊಂದಿಗೆ ಕೊರಿಯರ್ ಶುಲ್ಕ ಹಿಂದಿರುಗಿಸಲು ಸೂಚನೆ ನೀಡಿದೆ.
ತನ್ನ ಸ್ನೇಹಿತನ ಮದುವೆ ಬಟ್ಟೆ ಕಳೆದೋಗಲು ಕಾರಣವಾಗಿದ್ದ ಕೊರಿಯರ್ ಕಂಪೆನಿಯ ಕ್ರಮ ಪ್ರಶ್ನಿಸಿ ಬೆಂಗಳೂರಿನ ಮೈಸೂರು ರಸ್ತೆಯ ಪ್ರಮೋದ್ ಬಡಾವಣೆಯ ಎ.ಎಸ್.ಸಿದ್ದೇಶ್ ಎಂಬುವವರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ದೂರಿನ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯದ ನ್ಯಾಯಪೀಠ, ಕೊರಿಯರ್ ಕಂಪೆನಿಯು ತನ್ನ ಸೇವೆ ನಿರ್ವಹಿಸುವಲ್ಲಿ ಸೇವಾ ನ್ಯೂನ್ಯತೆಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟು ದೂರುದಾರರಿಗೆ 25 ಸಾವಿರ ರೂಪಾಯಿ ಪರಿಹಾರ ಹಾಗೂ ವ್ಯಾಜ್ಯದ ವೆಚ್ಚವಾಗಿ 10 ಸಾವಿರ ರೂ.ಗಳನ್ನು ಪಾವತಿಸಬೇಕು ಎಂದು ಆದೇಶಿಸಿದೆ. ಅಲ್ಲದೆ, ಬಟ್ಟೆಯ ಮೊತ್ತವಾದ 11,495 ರೂ. ಹಾಗೂ ಕೊರಿಯರ್ ಶುಲ್ಕ 500 ರೂ.ಗಳನ್ನು ಹಿಂದಿರುಗಿಸಲು ನಿರ್ದೇಶಿಸಿದೆ.
ಪ್ರಕರಣವೇನು?: ಸಿದ್ದೇಶ್ ಹಾಗೂ ಮನೀಶ್ ವರ್ಮ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಮನೀಶ್ಗೆ ಮದುವೆ ನಿಶ್ಚಯವಾಗಿ, 2016ರ ಡಿ.1ರಂದು ಹೈದರಾಬಾದ್ನಲ್ಲಿ ಮದುವೆ ನಡೆಯಬೇಕಿತ್ತು. ಆತ್ಮೀಯನಾಗಿದ್ದ ಮನೀಶ್ಗೆ ಸೂಟ್ ಕೊಡಿಸಬೇಕು ಹಾಗೂ ಮದುವೆಯ ದಿನ ಆತ ಅದನ್ನೇ ಧರಿಸಬೇಕು ಎಂಬ ಆಸೆ ಹೊಂದಿದ್ದ. ಇದೇ ಕಾರಣದಿಂದ 11,495 ರೂ. ಬೆಲೆಯ ಸೂಟ್ ಖರೀದಿಸಿದ್ದ.
ಸ್ನೇಹಿತನ ಇಚ್ಚೆಗೆ ಒಪ್ಪಿದ್ದ ಮನೀಶ್, ಮದುವೆಗೆ ಪ್ರತ್ಯೇಕ ಸೂಟ್ ಖರೀದಿಸಿರಲಿಲ್ಲ. ಅಲ್ಲದೆ, ಸಿದ್ದೇಶ್ ಅವರಿಗೆ ಸ್ನೇಹಿತನ ಮದುವೆಯಲ್ಲಿ ಭಾಗಿಯಾಗಲು ಹೈದರಾಬಾದ್ಗೆ ತೆರಳಲು ಸಾಧ್ಯವಾಗದ ಕಾರಣ ನ.25ರಂದು ಸೂಟ್ಅನ್ನು ಕೊರಿಯರ್ ಮೂಲಕ ರವಾನಿಸಿದ್ದ. ಆದರೆ, ಮದುವೆ ವೇಳೆ ಸೂಟ್ ಮನೀಶ್ಗೆ ಸಿಕ್ಕಿರಲಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ವಿಚಾರಿಸಿದ ನಂತರ, ಸೂಟ್ ಕಳೆದುಹೋಗಿದೆ ಎಂದು ಕೊರಿಯರ್ ಕಂಪೆನಿ ಹೇಳಿತ್ತು. ಇದರಿಂದ, ಅಸಮಾಧಾನಗೊಂಡಿದ್ದ ಸಿದ್ದೇಶ್ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಉಡುಪಿ: ದುರ್ಗಾ ದೌಡ್ ಮೆರವಣಿಗೆಯಲ್ಲಿ ತಲವಾರು ಪ್ರದರ್ಶನ; ಪ್ರಕರಣ ದಾಖಲಿಸಲು ವಿವಿಧ ಸಂಘಟನೆಗಳ ಒತ್ತಾಯ