ಡಿ.ಕೆ. ಶಿವಕುಮಾರ್ ಒಳಗೊಬ್ಬ ಉತ್ತಮ ನಟನಿದ್ದಾನೆ: ಡಿಕೆಶಿ ಕಣ್ಣೀರಿಗೆ ಸಿ.ಟಿ. ರವಿ ವ್ಯಂಗ್ಯ
ಸಿ.ಟಿ. ರವಿ
ಚಿಕ್ಕಮಗಳೂರು: ಕೆಪಿಸಿಸಿ(KPCC) ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್(D. K. Shivakumar) ಒಳಗೆ ಓರ್ವ ಉತ್ತಮ ಕಲಾವಿದನಿದ್ದಾನೆ ಎಂದು ಅಂದುಕೊಂಡಿರಲಿಲ್ಲ. ನಟನಾಗಿದ್ದರೆ ಅವರು ತಮ್ಮ ನಟನೆಗೆ ಆಸ್ಕರ್ ಪ್ರಶಸ್ತಿ ಪಡೆಯಬಹುದಾಗಿತ್ತು. ಚೆನ್ನಾಗಿ ನಟನೆ ಮಾಡುತ್ತಾರೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ(C. T. Ravi) ವ್ಯಂಗ್ಯವಾಡಿದರು.
ಭಾರತ್ ಜೋಡೋ ಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್ ಕಣ್ಣೀರಿಗೆ ವ್ಯಂಗ್ಯವಾಡಿದ ಸಿ.ಟಿ.ರವಿ, ಅವರಿಗೆ ಬಣ್ಣ ಹಾಕದೇ, ಗ್ಲಿಸರಿನ್ ಹಾಕದೇ ಕಣ್ಣೀರು ಹಾಕುವ ನಟನೆ ಒಲಿದು ಬಂದಿದ್ದು, ಈ ನಟನೆ ಹುಟ್ಟಿನಿಂದಲೇ ಬಂದಿರಬೇಕು. ಇಂತಹ ನಟನೆ ಇರುವ ಡಿಕೆಶಿ ಅಪ್ಪಿತಪ್ಪಿ ರಾಜಕೀಯಕ್ಕೆ ಬಂದಿದ್ದಾರೆ. ಅವರಿಗೆ ನಾಯಕ ನಟನಾಗುವ ವಯಸ್ಸು ಮುಗಿದಿದೆ. ಖಳನಾಯಕನಾಗುವ ತಾಕತ್ತು ಇಲ್ಲದಂತಾಗಿದೆ. ಪ್ರಯತ್ನ ಪಟ್ಟರೇ ಪೋಷಕ ನಟನ ಪಾತ್ರದಲ್ಲಿ ನಟಿಸಬಹುದು ಎಂದು ಟೀಕಿಸಿದರು.
ಭಾರತ ಇಬ್ಬಾಗವಾಗುವಾಗ ಸಹಿ ಹಾಕಿದ್ದು ಕಾಂಗ್ರೆಸ್ ಹೊರತು ಬಿಜೆಪಿಯಲ್ಲ. ಕೋಟ್ಯಾಂತರ ಜೀವವನ್ನು ಮತಾಂಧರ ಕೈಗೆ ಕೊಟ್ಟು ಬಂದವರು ಕಾಂಗ್ರೆಸ್ನವರು. ಮಹಿಳೆಯರು ಮಾನ ಪ್ರಾಣ ಉಳಿಸಿಕೊಳ್ಳಲಾಗದೆ ಸಾಯಬೇಕಾಯಿತು. ವಿಭಜಿತ ಭಾರತವನ್ನು ಸ್ವಾತಂತ್ರ್ಯ ಹೋರಾಟಗಾರರು ನಿರೀಕ್ಷಿಸಿರಲಿಲ್ಲ. ಅದಕ್ಕೆ ಕಾಂಗ್ರೆಸ್ ಪಕ್ಷದವರಿಗೆ ಪಶ್ಚಾಃತ್ತಾಪ ಇದೆಯಾ ಎಂದು ಪ್ರಶ್ನಿಸಿದರು.
ತುರ್ತು ಪರಿಸ್ಥಿತಿ ಹೇರಿಕೆ ನಮ್ಮಿಂದಾದ ಅಪರಾಧವಾಗಿದೆ ಎಂದು ಅನೇಕ ವರ್ಷಗಳ ಬಳಿಕ ಕಾಂಗ್ರೆಸ್ ಪಶ್ಚಾಃತಾಪ ಪಟ್ಟಿದೆ. ಭಾರತ ವಿಭಜನೆಗೆ ಸಹಿ ಹಾಕಿದ್ದು ಅಪರಾಧ ಅಂತ ಕಾಂಗ್ರೆಸ್ಗೆ ಅನಿಸುತ್ತಿಲ್ಲ, ಈ ಪ್ರಶ್ನೆಗೆ ಕಾಂಗ್ರೆಸ್ ಉತ್ತರಿಸಿ ಪಾದಯಾತ್ರೆ ಮುಂದುವರೆಸಲಿ, ಆಗ ಪಾದಯಾತ್ರೆಗೆ ಅರ್ಥ ಬರುತ್ತದೆ ಎಂದರು. ರಾಹುಲ್ ಗಾಂಧಿಗೆ ಬಲ ತುಂಬಲು ಪಾದಯಾತ್ರೆ ಹೊರಟಿದ್ದಾರೆ. ನೀತಿ, ನಿಯತ್ತು, ನೇತೃತ್ವ ಇಲ್ಲದ ಕಡೆ ಬಲ ಇರುವುದಿಲ್ಲ. ಕಾಂಗ್ರೆಸ್ಗೆ ಈ ಮೂರು ಇಲ್ಲದಂತಾಗಿ ದುರ್ಬಲವಾಗುತ್ತಿದೆ ಎಂದು ಟೀಕಿಸಿದರು.