ಚಂದ್ರಶೇಖರ ಗುರೂಜಿ ಹತ್ಯೆ: ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಕೆ
ಮಹಾಂತೇಶ್ | ಮಂಜುನಾಥ್ -( ಬಂಧಿತ ಆರೋಪಿಗಳು) ಹಾಗೂ ಚಂದ್ರಶೇಖರ್ ಗುರೂಜಿ
ಹುಬ್ಬಳ್ಳಿ, ಅ.6: ಮೂರು ತಿಂಗಳ ಹಿಂದೆ ನಡೆದಿದ್ದ ಸರಳ ವಾಸ್ತು ಕಂಪೆನಿಯ ಸಂಸ್ಥಾಪಕ, ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು, ಆರೋಪಿಗಳಿಬ್ಬರ ವಿರುದ್ಧ ಸುಮಾರು 800ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿಯನ್ನು ಹುಬ್ಬಳ್ಳಿ ಜೆಎಂಎಫ್ಸಿ ಕೋರ್ಟ್ನಲ್ಲಿ ಸಲ್ಲಿಸಿದ್ದಾರೆ.
ಗುರೂಜಿ ಹತ್ಯೆಗೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಧುಮ್ಮವಾಡ ಗ್ರಾಮದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ವಿರುದ್ಧ ಪೊಲೀಸರು ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.
ಗುರೂಜಿ ಅವರನ್ನು ಹಂತಕರಿಬ್ಬರು ಜು.5ರಂದು ಹುಬ್ಬಳ್ಳಿಯ ಉಣಕಲ್ಲ ಕೆರೆ ಬಳಿಯ ಹೊಟೇಲ್ನಲ್ಲಿ ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿಯಾಗಿದ್ದರು. ಘಟನೆ ನಡೆದ 4 ಗಂಟೆಯೊಳಗೆ ಹಂತಕರನ್ನು ರಾಮದುರ್ಗ ಬಳಿ ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿ ಪೊಲೀಸರು ವಶಕ್ಕೆ ಪಡೆದಿದ್ದರು.
ಇದೀಗ ಬಂಧಿತರ ವಿರುದ್ಧ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳು ಸಹಿತ ಕೊಲೆಗೆ ಸಂಬಂಧಿಸಿದ ಇನ್ನಿತರ ವಿಷಯಗಳ ಕುರಿತು ಕಲೆ ಹಾಕಲಾದ ಮಾಹಿತಿ ಹಾಗೂ ಸಂಗ್ರಹಿಸಿದ ಸಾಕ್ಷಿಗಳು ಸೇರಿ 800ಕ್ಕೂ ಹೆಚ್ಚು ಪುಟಗಳುಳ್ಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಗಳಿಂದ ಮಾಹಿತಿ ತಿಳಿದು ಬಂದಿದೆ. ಚಂದ್ರಶೇಖರ್ ಗುರೂಜಿ ಹತ್ಯೆಗೆ ಸಂಬಂಧಿಸಿದಂತೆ ಎಸಿಪಿ ವಿನೋದ ಮುಕ್ತೇದಾರ ನೇತೃತ್ವದಲ್ಲಿ ಐದು ತನಿಖಾ ತಂಡ ರಚಿಸಲಾಗಿತ್ತು.
ಇದನ್ನೂ ಓದಿ: ನಾವು ಚಂಡಮಾರುತಗಳನ್ನು ಎದುರಿಸಿದ್ದೇವೆ, ಒಟ್ಟಾಗಿ ಭಾರತವನ್ನು ಒಗ್ಗೂಡಿಸುತ್ತೇವೆ: ರಾಹುಲ್ ಗಾಂಧಿ