ಹನೂರು: ವಿ.ಎಸ್. ದೂಡ್ಡಿ ಗ್ರಾಮದಲ್ಲಿ ಸ್ಮಶಾನ ಮಂಜೂರು ಮಾಡಲು ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು
'ವಾರ್ತಾ ಭಾರತಿ' ವರದಿ ಫಲಶೃತಿ
ಸ್ಥಳ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು
ಹನೂರು : ವಿ ಎಸ್ ದೂಡ್ಡಿ ಗ್ರಾಮದಲ್ಲಿ 'ಶವ ಸಂಸ್ಕಾರಕ್ಕೆ ಸಿಗದ ಜಾಗ; ಖಾಸಗಿ ಜಾಗದಲ್ಲೇ ಸಂಸ್ಕಾರ ಮಾಡಿದ ಕುಟುಂಬಸ್ಥರು' ಎಂಬ ಶಿರ್ಷಿಕೆಯ ವಿಡಿಯೋ ಸುದ್ದಿ ಸೋಮವಾರ 'ವಾರ್ತಾಭಾರತಿ' ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾದ ಬಳಿಕ ಎಚ್ಚೆತ್ತ ಅಧಿಕಾರಿಗಳು ಇಂದು ಗ್ರಾಮಕ್ಕೆ ಭೇಟಿ ನೀಡಿ, ಸ್ಮಶಾನ ಮಂಜೂರು ಮಾಡಲು ಸ್ಥಳ ಪರಿಶೀಲನೆ ಮಾಡಿದ್ದಾರೆ.
ಹನೂರು ತಾಲೂಕಿನ ಹುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿ.ಎಸ್. ದೊಡ್ಡಿ ಗ್ರಾಮದಲ್ಲಿ ರಾಚಶೆಟ್ಟಿ ಎಂಬುವರು ನಿಧನಹೂಂದಿದ್ದರು.
ಮೃತನ ಕುಟುಂಬಸ್ಥರು ಖಾಸಗಿ ಜಮೀನು ಮಾಲಕ ವೆಂಕಟೇಶ್ ರವರನ್ನು ಗೋಗರೆದು ಅಂತ್ಯ ಸಂಸ್ಕಾರ ಮಾಡಿಕೊಡಲು ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿ, ನಂತರ ಶವಸಂಸ್ಕಾರ ಮಾಡಿದ್ದರು.
ಈ ಕುರಿತು 'ಅಂತ್ಯ ಸಂಸ್ಕಾರಕ್ಕೆ ಲಭ್ಯವಿಲ್ಲದ ಜಮೀನು, ಖಾಸಗಿ ಜಮೀನಿನಲ್ಲಿ ಅಂತ್ಯ ಸಂಸ್ಕಾರ' ಎಂಬ ವರದಿ ಮಂಗಳವಾರ ವಾರ್ತಾಭಾರತಿ ಪತ್ರಿಕೆಯಲ್ಲೂ ಪ್ರಕಟವಾಗಿತ್ತು. ಈ ಸಂಬಂಧ ಎಚ್ಚೆತ್ತ ಹನೂರು ತಹಶೀಲ್ದಾರ್ ಆನಂದಯ್ಯ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳು ಇಂದು ಗ್ರಾಮಕ್ಕೆ ಭೇಟಿ ನೀಡಿ, ಸ್ಮಶಾನಕ್ಕೆ ಸೂಕ್ತ ಸ್ಥಳವನ್ನು ಪರಿಶೀಲಿಸಿದ್ದಾರೆ.
ಈ ಬಗ್ಗೆ ರಾಜಸ್ವ ನಿರೀಕ್ಷಕ ಮಾದೇಶ್ ಪ್ರತಿಕ್ರಿಯಿಸಿ, 'ಹುತ್ತೂರು ವ್ಯಾಪ್ತಿಯ ಸರ್ವೆ ನಂಬರ್ 15 ಹಾಗೂ 16ರ ಸರ್ಕಾರಿ ಜಮೀನನ್ನು ಸ್ಮಶಾನಕ್ಕೆ ಗುರುತಿಸಲಾಗಿದ್ದು ಕಂದಾಯ ಇಲಾಖೆಯ ದಾಖಲೆ ಸರ್ವೆ ದಾಖಲೆಗಳ ಪರಿಶೀಲಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಇನ್ನೆರಡು ದಿನಗಳಲ್ಲಿ ಅಂತಿಮಗೊಳಿಸಲಾಗುವುದು' ಎಂದು ಮಾಹಿತಿ ನೀಡಿದ್ದಾರೆ.