ಬಿಜೆಪಿ ಸೇರಲು 30 ಕೋ.ರೂ. ಆಮಿಷ
ಬೆಳಗಾವಿ, ಜ.2: ‘ಆಪರೇಷನ್ ಕಮಲ’ದ ಮೂಲಕ ತನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಲು 30 ಕೋಟಿ ರೂ. ಆಮಿಷವೊಡ್ಡಲಾಗಿತ್ತು. ಆದರೆ ತಾನು ಅದಕ್ಕೆ ಬಲಿಯಾಗಲಿಲ್ಲ ಎಂದು ಸರಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಇಂದಿಲ್ಲಿ ಗಂಭೀರ ಆಪಾದನೆ ಮಾಡಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವೀರಶೈವ ನಾಯಕತ್ವ ಉಳಿಸುವಂತೆ ಬಿಜೆಪಿ ಮುಖಂಡರು ತನ್ನನ್ನು ಕೋರಿದ್ದು, ಅದಕ್ಕೆ ಆಮಿಷವನ್ನೂ ಒಡ್ಡಿದ್ದರು. ಆದರೆ ತಾನು ಅದಕ್ಕೆ ಬಲಿಯಾಗಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ಪದಚ್ಯುತಿ ಪ್ರಸ್ತಾವಕ್ಕೆ ಪಕ್ಷದ ಮುಖಂಡರ ಸೂಚನೆಯನ್ವಯ ಪಕ್ಷದ ಶಾಸಕರಿಂದ ಸಹಿ ಸಂಗ್ರಹಿಸಿದ್ದೇನೆ ಎಂದ ಅವರು, ಆ ಕಾರ್ಯದಲ್ಲಿ ತನ್ನದೇನೂ ಪಾತ್ರವಿಲ್ಲ. ತಾನು ಎಲ್ಲ ಸಚಿವರಿಗಿಂತ ಶಕ್ತಿಶಾಲಿ ಎಂದು ಹೇಳಿದರು. ಜ.4ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಜಿಲ್ಲೆಯಲ್ಲಿ ವೀರಭದ್ರೇಶ್ವರ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಲ್ಲದೆ, ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಪಟ್ಟಣ್ ತಿಳಿಸಿದರು.