ಚಿನ್ನಾಭರಣ, ಕೋವಿ ಲೂಟಿ ಮಾಡಿದ್ದ ಆರೋಪಿ ಸೆರೆ
ಶಿವಮೊಗ್ಗ, ಮಾ. 19: ವಿವಿಧೆಡೆ ಚಿನ್ನಾಭರಣ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಹಾಗೂ ಕೋವಿಯೊಂದನ್ನು ಅಪಹರಿಸಿದ್ದ ಆರೋಪಿಯನ್ನು ಭದ್ರಾವತಿ ತಾಲೂಕು ಹೊಳೆಹೊನ್ನೂರು ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ಕಳವು ಮಾಲು ವಶಕ್ಕೆ ಪಡೆದುಕೊಂಡಿದ್ದಾರೆ.
ಭದ್ರಾವತಿ ತಾಲೂಕು ಆದ್ರಿಹಳ್ಳಿಯ ನಿವಾಸಿ ಸುರೇಶ್ (25) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ 5 ಲಕ್ಷ ರೂ. ಮೌಲ್ಯದ 137 ಗ್ರಾಂ ತೂಕದ ಚಿನ್ನಾಭರಣ ಮತ್ತು ಒಂದು ಕೋವಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಆಲ್ದೂರು, ಕೊಟ್ಟಿಗೆಹಾರ ಮುಂತಾದ ಕಡೆಗಳಲ್ಲಿ 6 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂಶ ವಿಚಾರಣೆಯ ವೇಳೆ ಪೊಲೀಸರಿಗೆ ಗೊತ್ತಾಗಿದೆ.
ಸ್ಥಳೀಯವಾಗಿ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾದರೆ ಪೊಲೀಸರಿಗೆ ಶೀಘ್ರ ಸಿಕ್ಕಿಬೀಳುವ ಸಾಧ್ಯತೆಯಿರುವ ಕಾರಣದಿಂದ ಪರ ಊರುಗಳಲ್ಲಿ ಕಳ್ಳತನ ಮಾಡಿ ತನ್ನ ಊರಿಗೆ ಹಿಂದಿರುಗಿ ವಾಸಿಸುತ್ತಿದ್ದ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಪ್ರಕರಣವೊಂದಕ್ಕೆ ಸಂಬಂಧಿಸಿದ ತನಿಖೆ ನಡೆಸುತ್ತಿದ್ದ ಹೊಳೆಹೊನ್ನೂರು ಪೊಲೀಸರಿಗೆ ಆರೋಪಿ ಸಿಕ್ಕಿಬಿದ್ದಿದ್ದು, ವಿಚಾರಣೆಯ ವೇಳೆ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ವಿವರ ಬಾಯ್ಬಿಟ್ಟಿದ್ದಾನೆ.
ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.