ರಿಯಾಝ್ ಮೌಲವಿ ಹತ್ಯೆ
ಜಮಾಅತೆ ಇಸ್ಲಾಮೀ ಹಿಂದ್ ಕೇರಳ ರಾಜ್ಯಾಧ್ಯಕ್ಷ ಭೇಟಿ
ವೀರಾಜಪೇಟೆ. ಮಾ.31: ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಗೈಯಲ್ಪಟ್ಟ ಕಾಸರಗೋಡಿನ ಮದ್ರಸಾ ಅಧ್ಯಾಪಕ ರಿಯಾಝ್ ಮೌಲವಿಯವರ ನಿವಾಸಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಕೇರಳ ರಾಜ್ಯಾಧ್ಯಕ್ಷ ಎಂ.ಐ. ಅಬ್ದುಲ್ ಅಝೀಝ್ ಶುಕ್ರವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಸೌಹಾರ್ದ ವಾತಾವರಣವನ್ನು ಹಾಳುಗೆಡಿಸುವ ಗೂಢ ತಂತ್ರದ ಭಾಗವಾಗಿ ರಿಯಾಝ್ ವೌಲವಿಯವರ ಹತ್ಯೆ ನಡೆದಿದೆ. ಸಾಮಾಜಿಕ ವಾತಾವರಣವನ್ನು ಕಲುಷಿತಗೊಳಿಸುವ ಸಮಾಜದ್ರೋಹಿ ಶಕ್ತಿಗಳ ಬಗ್ಗೆ ಸರಕಾರ ಕ್ರಮವಹಿಸುವ ಅಗತ್ಯವಿದೆ ಎಂದರು.
ರಿಯಾಝ್ ಮೌಲವಿಯವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಆರಾಧನಾಲಯಗಳಿಗೆ ಹಾಗೂ ಆರಾಧನಾಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಸೂಕ್ತ ಸಂರಕ್ಷಣೆ ಒದಗಿಸಬೇಕು. ರಿಯಾಝ್ ಹತ್ಯೆ ಪ್ರಕರಣದ ಪೊಲೀಸ್ ತನಿಖೆಯನ್ನು ಊರ್ಜಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದರ
ಈ ವೇಳೆ ಜಮಾಅತೆ ಇಸ್ಲಾಮೀ ಹಿಂದ್ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಹಾಬ್ ಪೂಕೋಟೂರ್, ಸೋಲಿಡಾರಿಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಸಾದಿಕ್, ಎಸ್.ಐ.ಒ. ರಾಜ್ಯ ಕಾರ್ಯದರ್ಶಿ ತೌಫೀಕ್, ಕೊಡಗು ಜಿಲ್ಲಾ ಸಂಚಾಲಕ ಸಿ. ಎಚ್. ಅಫ್ಸರ್, ವಿರಾಜಪೇಟೆ ಸ್ಥಾನೀಯ ಅಧ್ಯಕ್ಷ ಕೆ.ಪಿ.ಕೆ. ಮುಹಮ್ಮದ್ ಹಾಜರಿದ್ದರು.