ನಿಷೇಧಿತ ನೋಟು ಸಾಗಣೆ: ಓರ್ವನ ಬಂಧನ
ಭಟ್ಕಳ, ಎ.9: ನವೆಂಬರ್ 8ರಂದು ಕೇಂದ್ರ ಸರಕಾರದಿಂದ ನಿಷೇಧಿತ 500, 1000 ರೂ. ಮುಖಬೆಲೆಯ ನೋಟುಗಳನ್ನು ಅಕ್ರಮ ಸಾಗಾಟ ಮಾಡಿದ ಆರೋಪದಲ್ಲಿ ಶನಿವಾರ ರೈಲ್ವೆ ಪೊಲೀಸರು ಓರ್ವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ರೈಲ್ವೆ ಪೊಲೀಸರಿಂದ ವಿಚಾರಣೆಗೊಳಗಾದ ವ್ಯಕ್ತಿಯನ್ನು ಕೇರಳ ಕಾಸರಗೋಡು ಮೂಲದ ಅಬ್ದುಲ್ ಮುಹಿದ್ದೀನ್ಎಂದು ಗುರುತಿಸಲಾಗಿದೆ.
ಈತ ನಿಷೇಧಿತ ಸುಮಾರು 18 ಲಕ್ಷ ರೂ. ಮೌಲ್ಯದ ನೋಟುಗಳೊಂದಿಗೆ ಮಡಗಾಂವ್ದಿಂದ ಮಂಗಳೂರು ಮಾರ್ಗವಾಗಿ ಕೇರಳಕ್ಕೆ ತೆರಳುವ ನೇತ್ರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ತಪಾಸಣೆ ನಡೆಸಿದ ಪೊಲೀಸರಿಗೆ ಸಿಕ್ಕಿ ಬಿದ್ದು, ಪ್ರಕರಣ ಬೆಳಕಿಗೆ ಬಂದಿದೆ. 1000 ಮುಖಬೆಲೆಯ 13ಲಕ್ಷ ಹಾಗೂ 500 ರೂ.ಮುಖಬೆಲೆಯ 5ಲಕ್ಷ ರೂ. ವೌಲ್ಯದ ನಿಷೇಧಿತ ನೋಟುಗಳು ಪತ್ತೆಯಾಗಿದ್ದು ಆರೋಪಿಯನ್ನು ವಶಕ್ಕೆ ಪಡೆದ ರೈಲ್ವೆ ಪೊಲೀಸರು ಭಟ್ಕಳ ನಗರ ಠಾಣೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಅಪರಾಧ ವಿಭಾಗದ ಪಿಎಸ್ಸೈಪರಮೇಶ್ವರಪ್ಪ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇಷ್ಟೊಂದು ದೊಡ್ಡ ಮೊತ್ತದ ನಿಷೇಧಿತ ನೋಟುಗಳನ್ನು ಯಾರಿಂದ ಪಡೆದುಕೊಂಡಿದ್ದ,ಎಲ್ಲಿಗೆ ಸಾಗಿಸುತ್ತಿದ್ದ ಎನ್ನುವ ವಿಚಾರ ತನಿಖೆಯಿಂದಷ್ಟೇ ತಿಳಿಯಬೇಕಾಗಿದೆ.
ಕಾರ್ಯಚರಣೆಯಲ್ಲಿ ಕಾರವಾರ ಜಿಲ್ಲಾ ರೈಲ್ವೆ ಪೊಲೀಸ್ ಸಹಾಯಕ ಕಮಿಷನರ್ ಪ್ರವೀಣ್ಕುಮಾರ್, ವಿನೋದಕುಮಾರ್, ಕಾರವಾರ ರೈಲ್ವೆ ಪಿಎಸ್ಸೈ ರಾಜೇಶಕುಮಾರ್ ದುಬೆ, ಕಾರವಾರ ಸಬ್ ಇನ್ಸ್ಪೆಕ್ಟರ್, ಸಿಬ್ಬಂದಿ ಅಜೇಶ ವಿ.ಕೆ, ಮಾರುತಿ ಮಾದರ್ ಮತ್ತಿತರರು ಭಾಗವಹಿಸಿದ್ದರು.