ಅಂಬೇಡ್ಕರ್ ಭವನವನ್ನು ನಗರಸಭೆಗೆ ಹಸ್ತಾಂತರಿಸಲು ಒತ್ತಾಯಿಸಿ ದಸಂಸ ಧರಣಿ
ತುಮಕೂರು, ಎ.11: ಶಿರಾ ತಾಪಂ ನಿರ್ವಹಿಸುತ್ತಿರುವ ಅಂಬೇಡ್ಕರ್ ಭವನವನ್ನು ನಗರಸಭೆಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ತಾಲೂಕು ದಲಿತ ಸಂಘರ್ಷ ಸಮಿತಿ ಧರಣಿ ನಡೆಸಿದೆ.
ಸರಕಾರ 1.50 ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡಿ ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿದೆ. ಆದರೆ ಅದರ ನಿರ್ವಹಣೆ ಸರಿಯಲ್ಲದ ಕಾರಣ ಜನರಿಗೆ ಲಭ್ಯವಾಗುತ್ತಿಲ್ಲ. ಮೂಲಭೂತ ಸೌಕರ್ಯಗಳ ಕೊರತೆಯೂ ಇದೆ. ಕಟ್ಟಡ ನಗರದ ಒಳಭಾಗದಲ್ಲಿ ಇರುವುದರಿಂದ ಕಟ್ಟಡ ನಿರ್ವಹಣೆಯ ಹೊಣೆಯನ್ನು ನಗರಸಭೆಗೆ ವಹಿಸುವಂತೆ ಧರಣಿ ನಿರತ ದಲಿತ ಮುಖಂಡರು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಜೆಡಿಎಸ್ ಮುಖಂಡ ಮಾಜಿ ಸಚಿವ ಬಿ.ಸತ್ಯನಾರಾಯಣ ಪ್ರತಿಭಟನೆಗೆ ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡರು.
ದಲಿತ ಮುಖಂಡ ಬೆಳದಮಡಗು ಭರತ್ ಕುಮಾರ್ ಮಾತನಾಡಿ, ತಳ ಸಮುದಾಯಗಳು ಇಂದು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಅಧಿಕಾರ ಅನುಭವಿಸುತ್ತಿರುವುದಕ್ಕೆ ಅಂಬೇಡ್ಕರರೇ ಕಾರಣ. ಅಂತಹ ಮಹನೀಯರ ಹೆಸರಿನ ಭವನವನ್ನು ನೀವು ಸರಿಯಾಗಿ ನಿರ್ವಹಣೆ ಮಾಡದೇ, ಅವ್ಯವಹಾರಗಳ ತಾಣವಾಗಿ ಬದಲಾಗಿದೆ. ನಗರಸಭೆಯಲ್ಲಾದರೆ ಸ್ವಚ್ಚತೆ ಮಾಡಲು, ಸರಿಯಾಗಿ ನಿರ್ವಹಿಸಲು ಜನರಿದ್ದಾರೆ. ಈ ಹಿಂದೆ ತಾ.ಪಂ.ಸದಸ್ಯರ ಕೋರಿಕೆಯಂತೆ ಒಂದು ವರ್ಷ ಕಾಲಾವಕಾಶ ನೀಡಲಾಗಿತ್ತು. ಆದರೆ ಯಾವುದೇ ಬದಲಾವಣೆಯಾಗಿಲ್ಲ. ಆದ್ದರಿಂದ ಭವನವನ್ನು ನಗರಸಭೆಗೆ ವರ್ಗಾಯಿಸಿಕೊಡಿ ಎಂದು ಒತ್ತಾಯಿಸಿದರು.
ಧರಣಿಯಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಟೈರ್ ರಂಗನಾಥ್, ಲಕ್ಷ್ಮೀಕಾಂತ್, ಮಾಗೋಡು ಭೂತೇಶ್, ಮಾಗೋಡು ಯೋಗಾನಂದ್, ಕೋಟೆ ರವಿ, ತಿಪ್ಪೇಸ್ವಾಮಿ, ಕೆ.ರಾಜು, ಶಿವಣ್ಣ, ಕಿಟ್ಟಪ್ಪಾಜಿ, ಗಿರಿಯಪ್ಪ, ಕಾರೆಹಳ್ಳಿ ರಂಗನಾಥ್, ಕೆಂಚಮ್ಮ, ಸಣ್ಣ ಲಕ್ಕಮ್ಮ, ಲಕ್ಷ್ಮಕ್ಕ, ನರಸಮ್ಮ, ಪುಟ್ಟ ಲಕ್ಕಮ್ಮ, ನೀರಕಲ್ ನರಸಿಂಹಯ್ಯ, ಬಿ.ಎನ್.ಬ್ರಹ್ಮಾನಂದ್, ಶ್ರೀನಿವಾಸ ನಾಯ್ಕ ಮೊದಲಾದವರು ಭಾಗವಹಿಸಿದ್ದರು.