ಡಾ.ಶ್ರೀ ಶಿವಕುಮಾರಸ್ವಾಮೀಜಿಯವರಿಗೆ "ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ" ಪ್ರದಾನ
ತುಮಕೂರು, ಎ.17: ವಿವಿಧ ಧರ್ಮ, ಜಾತಿ, ಪಂಗಡ, ಸಂಸ್ಕೃತಿಗಳನ್ನು ಹೊಂದಿರುವ ಭಾರತದಂತಹ ರಾಷ್ಟ್ರದಲ್ಲಿ ಭಗವಾನ್ ಮಹಾವೀರರು ಬೋಧಿಸಿದ ಸಹನೆ ಮತ್ತು ಸಹಿಷ್ಣುತೆ ಅತ್ಯಂತ ಅಗತ್ಯವಾಗಿದ್ದು, ಇದನ್ನು ತನ್ನ ಜೀವನದುದ್ದಕ್ಕು ಪಾಲಿಸಿಕೊಂಡು ಬಂದಿರುವ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರಿಗೆ ರಾಜ್ಯ ಸರಕಾರ "ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ" ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಸಿದ್ದಗಂಗಾ ಮಠದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ 2016ನೇ ಸಾಲಿನ "ಭಗವಾನ್ ಮಹಾವೀರರ ಶಾಂತಿ ಪ್ರಶಸ್ತಿ"ಯನ್ನು ಸಿದ್ದಗಂಗಾ ಮಠಾಧ್ಯಕ್ಷ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರಿಗೆ ಪ್ರದಾನ ಮಾಡಿ ಮಾತನಾಡುತ್ತಿದ್ದ ಅವರು, ಅಕ್ಷರ ವಂಚಿತರಾದ ಸಮುದಾಯಗಳ ಸಾವಿರಾರು ಮಕ್ಕಳಿಗೆ ಜಾತಿ, ಧರ್ಮ ಭೇಧವಿಲ್ಲದೆ ಅನ್ನ, ಅಕ್ಷರ, ಆಶ್ರಯ ನೀಡಿ ಅವರ ಬಾಳಿಗೆ ಬೆಳಕಾಗುವ ಮೂಲಕ ಕಂದಕ ರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರಲ್ಲಿ ಡಾ.ಶ್ರೀಶಿವಕುಮಾರ ಸ್ವಾಮೀಜಿ ಮೊದಲಿಗರು. ರಾಜ್ಯಸರಕಾರ ಶ್ರೀ ಭಗವಾನ್ ಮಹಾವೀರರ ಶಾಂತಿ ಪ್ರಶಸ್ತಿಯನ್ನು ಸ್ವಾಮೀಜಿಯವರಿಗೆ ನೀಡುವ ಮೂಲಕ ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ ಎಂದರು.
ಸಾವಿರಾರು ವರ್ಷಗಳಿಂದ ಭಾರತದ ನೆಲದಲ್ಲಿರುವ ಜೈನ ಧರ್ಮದ ತಿರುಳು ಅಹಿಂಸೆ ಮತ್ತು ಶಾಂತಿ. ಎಲ್ಲಿ ಅಹಿಂಸೆ ಇರುತ್ತದೆಯೋ ಅಲ್ಲಿ ಶಾಂತಿ ನೆಲೆಸಿರುತ್ತದೆ. ನಾವು ಬದುಕುವ ಜೊತೆಗೆ ಇತರರನ್ನು ಬದುಕುವಂತೆ ಪ್ರೇರೇಪಿಸುವುದೇ ನಿಜವಾದ ಧರ್ಮ. ಇದನ್ನೇ ಆಧರಿಸಿಯೇ ಕುವೆಂಪು ಕನ್ನಡ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದರು. ಇನ್ನೊಬ್ಬರನ್ನು ಪ್ರೀತಿಸುವ, ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂಬುದನ್ನು ಬೌದ್ಧ, ಜೈನ, ಬಸವಾದಿ ಶರಣರು, ದಾಸರು, ಸೂಫಿ ಸಂತರು ತಮ್ಮ ಸಂದೇಶಗಳ ಮೂಲಕ ಸಾರಿದ್ದಾರೆ. ಮನುಷ್ಯರಾಗಿ ಬಾಳುವ ವಾತಾವರಣ ನಿರ್ಮಾಣವಾಗಬೇಕು ಎಂಬುದು ಎಲ್ಲರ ಆಶಯವಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸ್ವಾಮೀಜಿಯವರ ದೂರದೃಷ್ಟಿಯ ಫಲದಿಂದಾಗಿಯೇ ಸಿದ್ದಗಂಗಾ ಮಠ ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣ. ಸ್ವಾಮೀಜಿಯವರಿಗೆ ನಾಡಿನ ಎಲ್ಲಾ ಅತ್ಯುನ್ನತ ಪ್ರಶಸ್ತಿಗಳು ಲಭಿಸಿವೆ. ಅವರಿಗೆ "ಭಾರತರತ್ನ" ಸಿಗಬೇಕು ಎನ್ನುವುದು ಭಕ್ತರ ಮತ್ತು ನನ್ನ ಆಶಯವಾಗಿದೆ. ಈಗಾಗಲೇ ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಪತ್ರವನ್ನು ಕಳುಹಿಸಿದೆ. ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನು ಭೇಟಿಯಾಗಿ ಸ್ವಾಮೀಜಿಯವರಿಗೆ "ಭಾರತರತ್ನ" ಪ್ರಶಸ್ತಿ ನೀಡುವಂತೆ ಒತ್ತಾಯಿಸಲಾಗುವುದು. ಭಾರತರತ್ನಕ್ಕೆ ಸ್ವಾಮೀಜಿಗಿಂತ ಆರ್ಹರು ಮತ್ತೊಬ್ಬರಿಲ್ಲ ಎಂದು ಸಿದ್ದರಾಮಯ್ಯ ನುಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರಿಗೆ 2016ನೇ ಸಾಲಿನ "ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ"ಯನ್ನು ಪ್ರದಾನಿಸಿ ಗೌರವಿಸಿದರು. ಪ್ರಶಸ್ತಿ 10 ಲಕ್ಷ ರೂ., ಪ್ರಶಸ್ತಿ ಫಲಕ, ಸ್ಮರಣಿಕೆಯನ್ನು ಒಳಗೊಂಡಿದೆ.
ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಿದ್ದಗಂಗಾ ಮಠದ ಕಿರಿಯ ಶ್ರೀಗಳು, ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್, ಶಾಸಕರಾದ ಬಿ.ಸುರೇಶಗೌಡ, ಡಾ.ರಫೀಕ್ ಅಹಮದ್, ವಿಧಾನಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ, ಎಂ.ಡಿ.ಲಕ್ಷ್ಮಿನಾರಾಯಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಚಕ್ರವರ್ತಿ ಮೋಹನ್, ನಿರ್ದೇಶಕ ಟಿ.ಕೆ.ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.