ರಸ್ತೆಯ ಗುಂಡಿಗಳನ್ನು ಮುಚ್ಚುವುದರೊಂದಿಗೆ ಯುವ ಶಕ್ತಿ ವೇದಿಕೆಯ ಉದ್ಘಾಟನೆ
ಸಿದ್ದಾಪುರ, ಆ.18: ಗುಹ್ಯ ಗ್ರಾಮಕ್ಕೆ ತೆರಳುವ ಕೂಡುಗದ್ದೆ ರಸ್ತೆಯ ಗುಂಡಿಗಳನ್ನು ಮುಚ್ಚುವುದರೊಂದಿಗೆ ಸಿದ್ದಾಪುರದ ಯುವ ಶಕ್ತಿ ವೇದಿಕೆಯನ್ನು ವಿಭಿನ್ನವಾಗಿ ಉದ್ಘಾಟಿಸಲಾಯಿತ್ತು.
ಸಿದ್ದಾಪುರದ ಕೆಲ ಯುವಕರು ಸೇರಿಕೊಂಡು ನೂತನವಾಗಿ ಯುವ ಶಕ್ತಿ ವೇದಿಕೆ ಎಂಬ ಸಮಿತಿಯೊಂದನ್ನು ರಚಿಸಿದ್ದು, ಇತರ ಸಂಘ ಸಂಸ್ಥೆಗಳ ರೀತಿಯಲ್ಲಿ ಸಮಿತಿಯನ್ನು ಉದ್ಘಾಟಿಸದೆ ಸಮಾಜ ಸೇವೆಯ ಮೂಲಕ ಸಮಿತಿಯನ್ನು ಉದ್ಘಾಟಿಸಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಕೂಡುಗದ್ದೆ ರಸ್ತೆಯಲ್ಲಿ ಸರಿಪಡಿಸುವುದರೊಂದಿಗೆ ಸಮಿತಿಯನ್ನು ಉದ್ಘಾಟಿಸಿದೆ. ಹಲವಾರು ತಿಂಗಳುಗಳಿಂದ ಕೂಡುಗದ್ದೆಯ ರೆಸ್ತೆಯು ಡಾಮರೀಕರಣ ಕಾಣದೆ ಗುಂಡಿ ಬಿದ್ದಿದ್ದು, ಬಾಡಿಗೆ ವಾಹನ ಸೇರಿದಂತೆ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು. ಇದನ್ನರಿತ ಯುವ ಶಕ್ತಿ ವೇದಿಕೆಯ ತಂಡ ತಮ್ಮದೇ ಹದಗೆಟ್ಟಿರುವ ರಸ್ತೆಯ ಗುಂಡಿಗಳನ್ನು ಇಟ್ಟಿಗೆ ಸೇರಿದಂತೆ ಕಲ್ಲುಗಳನ್ನು ಹಾಕಿ ದುರಸ್ತಿ ಪಡಿಸಲಾಯಿತ್ತು.
ಈ ಸಂದರ್ಭ ಯುವ ಶಕ್ತಿ ವೇದಿಕೆಯ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ, ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫ, ಸಂಘಟನಾ ಕಾರ್ಯದರ್ಶಿ ಸತೀಶ್ ನಾರಾಯಣ್, ಸಹ ಕಾರ್ಯದರ್ಶಿ ಕೆ.ಎಸ್ ಸುನಿಲ್ ಸೇರಿದಂತೆ ಇನ್ನಿತರರು ಇದ್ದರು. ಗ್ರಾಮಸ್ಥರು ಕೂಡ ಯುವ ಶಕ್ತಿ ವೇದಿಕೆಯೊಂದಿಗೆ ಕೈಜೋಡಿಸಿ ರಸ್ತೆ ದುರಸ್ಥಿ ಕೆಲಸದಲ್ಲಿ ಪಾಲ್ಗೊಂಡರು.
ಗ್ರಾಮಸ್ಥರ ಶ್ಲಾಘನೆ :
ಹಲವು ತಿಂಗಳುಗಳಿಂದ ಹದಗೆಟ್ಟಿದ್ದ ಕೂಡುಗದ್ದೆ ರಸ್ತೆಯ ಗುಂಡಿಗಳನ್ನು ಮುಚ್ಚಿ ರಸ್ತೆಯನ್ನು ದುರಸ್ಥಿಪಡಿಸಿದ ಯುವ ಶಕ್ತಿ ವೇದಿಕೆಯ ಕಾರ್ಯವನ್ನು ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿದ್ದು, ಶ್ರಮಾದಾನದ ಮೂಲಕ ವಿಭಿನ್ನವಾಗಿ ಸಮಿತಿಯ ಉದ್ಘಾಟನೆ ಮಾಡಿರುವುದು ಕೂಡ ಹಲವರು ಶ್ಲಾಘಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜ ಸೇವೆಯ ಕೆಲಸಗಳನ್ನು ಮಾಡುವುದಾಗಿ ಯುವ ಶಕ್ತಿ ತಂಡ ತಿಳಿಸಿದೆ.