ಕಾರ್ಮಿಕನನ್ನು ಬೋನಿನೊಳಗೆ ಕೂಡಿಹಾಕಿ ನಾಯಿಗಳಿಂದ ಕಚ್ಚಿಸಿದ ಮಾಲಕ
ವೀರಾಜಪೇಟೆ, ಸೆ. 2: ಸಾಲ ಪಡೆದುಕೊಂಡು ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ತೋಟದ ಮಾಲಕ ಕೂಲಿ ಕಾರ್ಮಿಕನನ್ನು ನಾಯಿಯ ಬೋನಿನಲ್ಲಿ ಕೂಡಿ ಹಾಕಿ ನಾಯಿಗಳಿಂದ ಕಚ್ಚಿಸಿದ್ದಾನೆ ಎನ್ನಲಾದ ಅಮಾನವಿಯ ಘಟನೆ ನಿವಾರ ವೀರಾಜಪೇಟೆ ತಾಲೂಕಿನ ಬಾಳೆಲೆ ವ್ಯಾಪ್ತಿಯಲ್ಲಿ ನಡೆದಿದೆ.
ಬಾಳೆಲೆ ಗ್ರಾಮದ ಹರೀಶ ನಾಯಿಗಳಿಂದ ಹಲ್ಲೆಗೊಳಗಾದ ಕೂಲಿ ಕಾರ್ಮಿಕ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಬಾಳೆಲೆ ಗ್ರಾಮದ ತೋಟದ ಮಾಲಕ ಕಿಶಾನ್ ಎಂಬಾತ ತನ್ನ ತೋಟದ ಕಾರ್ಮಿಕ ಹರೀಶ ಎಂಬವರಿಗೆ ಕೆಲ ದಿನಗಳ ಹಿಂದೆ ನಾಲ್ಕು ಸಾವಿರ ರೂ. ನೀಡಿದ್ದು, ಅದನ್ನು ಹಿಂದಿರುಗಿಸಿದ ಬಳಿಕವೂ ಸಾಲ ಹಿಂದಿರುಗಿಸುವಂತೆ ಪೀಡಿಸುತ್ತಿದ್ದ ಮಾಲಕ ಕಿಶನ್ ಮತ್ತು ಆತನ ಸ್ನೇಹಿತ ಮಧು ಎಂಬವರು ತಮ್ಮ ಜೀಪ್ನಲ್ಲಿ ಬಂದು ಕಾಫಿಯ ತೋಟದಲ್ಲಿರುವ ಹರೀಶ್ ರನ್ನು ಗೋದಾಮಿಗೆ ಕರೆದೊಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಗೋದಾಮಿನ ಒಳಗೆ ಕೂಡಿಹಾಕಿ ಮೂರು ನಾಯಿಗಳನ್ನು ಬಿಟ್ಟು ಕಚ್ಚಿಸಿದ್ದಾರೆ ಎಂದು ಹರೀಶ ದೂರಿದ್ದಾರೆ.
ನಾಯಿಗಳ ದಾಳಿಯಿಂದ ಹರೀಶ್ ಕೈ, ಕಾಲು, ಬೆನ್ನು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇದನ್ನು ಗಮನಿಸಿದ ಮಾಲಕ, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೆಂದ್ರದ ಆವರಣದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ಹರೀಶ ಪೊನ್ನಂಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.
ಗಾಯಗೊಂಡಿದ್ದ ಹರೀಶನನ್ನು ಗಮನಿಸಿದ ಸಮುದಾಯ ಆರೋಗ್ಯ ಕೆಂದ್ರದ ಸಿಬ್ಬಂದಿ ಅಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.