ರಾಜ್ಯದಲ್ಲಿ ಹುಕ್ಕಾ ನಿಷೇಧಕ್ಕೆ ಚಿಂತನೆ: ಸಚಿವ ಕೆ.ಜೆ.ಜಾರ್ಜ್
ಬೆಂಗಳೂರು,ಅ. 16: ರಾಜ್ಯದಲ್ಲಿ ಹುಕ್ಕಾ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಸೋಮವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯ ಅಧಿಕಾರಿಗಳು ಮತ್ತು ನೌಕರರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಧೂಮಪಾನ ಮುಕ್ತ ನಗರ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹುಕ್ಕಾ ನಿಷೇಧದ ಕುರಿತು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರೊಂದಿಗೆ ಶೀಘ್ರದಲ್ಲೇ ಸಮಾಲೋಚನೆ ನಡೆಸಲಾಗುವುದು. ತಾನು ಗೃಹ ಸಚಿವನಾಗಿದ್ದ ವೇಳೆ ಹುಕ್ಕಾವನ್ನು ಸಂಪೂರ್ಣವಾಗಿ ನಿಷೇಧಿಸುವ ಬಗ್ಗೆ ಕಾನೂನು ಜಾರಿಗೆ ತರಲಾಗಿತ್ತು. ಆದರೆ ಕೆಲವರು ನ್ಯಾಯಾಲಯದ ಮೊರೆ ಹೋಗಿ ತಡೆ ಹಿಡಿಯಲಾಗಿತ್ತು ಎಂದು ಸ್ಮರಿಸಿದರು.
ರಾಜ್ಯದಲ್ಲಿ ಎರಡು ಕೋಟಿ ಜನರು ಧೂಮಪಾನ ವ್ಯಸನಿಗಳಾಗಿದ್ದಾರೆ. ಶೇ.30 ರಷ್ಟು ಜನರು ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ. ಧೂಮಪಾನ ಮಾಡುವವರಷ್ಟೇ ಅಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಅಮಾಯಕರು ಇನ್ನೊಬ್ಬರು ಬಿಟ್ಟ ಸಿಗರೇಟ್ ಹೊಗೆಯಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರನ್ನು ಧೂಮಪಾನ ಮುಕ್ತ ನಗರವನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಬೇಕು. ಧೂಮಪಾನದ ದುಷ್ಪರಿಣಾಮದ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸಲು ಸಂಘ ಸಂಸ್ಥೆಗಳು ಜಾಗೃತಿ ಅಭಿಯಾನ ರೂಪಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಕ್ಯಾನ್ಸರ್ ತಜ್ಞ ವಿಶಾಲ್ ರಾವ್, ಡಾ.ತ್ರಿವೇಣಿ ಸೇರಿದಂತೆ ಇತರರು ಇದ್ದರು.