ಶ್ರೀಲಂಕಾಕ್ಕೆ ಕಾದಿದೆ ನಾಗ್ಪುರದ ‘ಗ್ರೀನ್ ಪಿಚ್’ ಸವಾಲು
ಎರಡನೇ ಟೆಸ್ಟ್
ನಾಗ್ಪುರ, ನ.23: ಮೊದಲ ಟೆಸ್ಟ್ನಲ್ಲಿ ಕೊನೆಯ ಕ್ಷಣದ ತನಕ ಹೋರಾಡಿ ಬೆಳಕಿನ ಅಭಾವದಿಂದಾಗಿ ಗೆಲುವಿನಿಂದ ವಂಚಿತವಾಗಿದ್ದ ಆತಿಥೇಯ ಭಾರತ ಶುಕ್ರವಾರ ಇಲ್ಲಿ ಆರಂಭವಾಗಲಿರುವ ಎರಡನೆ ಟೆಸ್ಟ್ನಲ್ಲಿ ಶ್ರೀಲಂಕಾ ವಿರುದ್ಧ ಪ್ರಾಬಲ್ಯ ಮುಂದುವರಿಸುವ ಯೋಚನೆಯಲ್ಲಿದೆ.
ಕೋಲ್ಕತಾದಲ್ಲಿ ಡ್ರಾನಲ್ಲಿ ಕೊನೆಗೊಂಡ ಮೊದಲ ಟೆಸ್ಟ್ ಪಂದ್ಯದ ಕೊನೆಯ ಅವಧಿಯಲ್ಲಿ ಶ್ರೀಲಂಕಾದ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳನ್ನು ಬೇಗನೆ ಪೆವಿಲಿಯನ್ಗೆ ಕಳುಹಿಸಿ ಮಾನಸಿಕ ಮೇಲುಗೈ ಸಾಧಿಸಿರುವ ಭಾರತ ಜಮ್ತಾದ ವಿದರ್ಭ ಕ್ರಿಕೆಟ್ ಸಂಸ್ಥೆ(ವಿಸಿಎ) ಸ್ಟೇಡಿಯಂನ ಗ್ರೀನ್ ಪಿಚ್ನಲ್ಲಿ ಮತ್ತೊಂದು ಪಂದ್ಯ ಆಡಲಿದೆ. ಮುಂದಿನ ತಿಂಗಳು ಭಾರತದ ದಕ್ಷಿಣ ಆಫ್ರಿಕ ಪ್ರವಾಸವನ್ನು ದೃಷ್ಟಿಯಲ್ಲಿಟ್ಟುಕೊಂಡು ನಾಗ್ಪುರದಲ್ಲಿ ಹಸಿರು ಹುಲ್ಲಿನ ಪಿಚ್ನ್ನು ತಯಾರಿಸಲಾಗಿದೆ.
‘‘ಇದು ಉತ್ತಮ ಪಿಚ್ನಂತೆ ಕಾಣುತ್ತಿದೆ. ಮೊದಲೆರಡು ದಿನಗಳಲ್ಲಿ ವೇಗದ ಬೌಲರ್ಗಳಿಗೆ ನೆರವಾಗುವ ಸಾಧ್ಯತೆಯಿದೆ’’ ಎಂದು ಭಾರತದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕೋಲ್ಕತಾ ಟೆಸ್ಟ್ನಲ್ಲಿ ಭಾರತದ ಬ್ಯಾಟ್ಸ್ಮನ್ಗಳು ಸುರಂಗ ಲಕ್ಮಲ್ ನೇತೃತ್ವದ ಶ್ರೀಲಂಕಾ ಬೌಲರ್ಗಳನ್ನು ಎದುರಿಸಲು ಪರದಾಟ ನಡೆಸಿದ್ದರು. ಒತ್ತಡದ ಪರಿಸ್ಥಿತಿಯಲ್ಲಿ ಆಕರ್ಷಕ ಶತಕ ಸಿಡಿಸಿದ್ದ ನಾಯಕ ಕೊಹ್ಲಿ ತಂಡವನ್ನು ಆಧರಿಸಿದ್ದರು.
ಶಿಖರ್ ಧವನ್ ವೈಯಕ್ತಿಕ ಕಾರಣದಿಂದ ವಿಶ್ರಾಂತಿ ಪಡೆದಿರುವ ಹಿನ್ನೆಲೆಯಲ್ಲಿ ಚೆನ್ನೈನ ಆರಂಭಿಕ ಆಟಗಾರ ಮುರಳಿ ವಿಜಯ್ ಅವರು ಕೆ.ಎಲ್.ರಾಹುಲ್ರೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ.
ಒಟ್ಟು 77 ಟೆಸ್ಟ್ ಪಂದ್ಯಗಳನ್ನು ಆಡಿರುವ ಇಶಾಂತ್ ಶರ್ಮ ಭಾರತ ಟೆಸ್ಟ್ ತಂಡದಲ್ಲಿರುವ ಹಿರಿಯ ಬೌಲರ್ ಆಗಿದ್ದಾರೆ. ಇನ್ನೋರ್ವ ವೇಗಿ ಭುವನೇಶ್ವರ ಕುಮಾರ್ ತನ್ನ ವಿವಾಹದ ಹಿನ್ನೆಲೆಯಲ್ಲಿ ತಂಡದಿಂದ ಹೊರಗುಳಿದಿದ್ದಾರೆ. ಭುವಿಯಿಂದ ತೆರವಾದ ಸ್ಥಾನವನ್ನು ಇಶಾಂತ್ ತುಂಬಬಹುದು ಅಥವಾ ರೋಹಿತ್ ಶರ್ಮ ಹೆಚ್ಚುವರಿ ಬ್ಯಾಟ್ಸ್ಮನ್ ಆಗಿ ಆಡಬಹುದು ಅಥವಾ ವಿಜಯ್ ಶಂಕರ್ ಬೌಲಿಂಗ್ ಆಲ್ರೌಂಡರ್ ಆಗಿ ಚೊಚ್ಚಲ ಪಂದ್ಯ ಆಡಬಹುದು. ಭಾರತದ ಸ್ಪಿನ್ನರ್ಗಳಿಬ್ಬರೂ ಆಡಬಹುದು. ಏಕೆಂದರೆ ನಾಗ್ಪುರದ ಎರಡನೇ ಇನಿಂಗ್ಸ್ನಲ್ಲಿ ಸ್ಪಿನ್ನರ್ಗಳು ವಿಕೆಟ್ ಪಡೆಯುವ ಸಾಧ್ಯತೆಯಿದೆ.
ಇಶಾಂತ್ ರಣಜಿ ಟ್ರೋಫಿಯಲ್ಲಿ 20 ವಿಕೆಟ್ಗಳನ್ನು ಕಬಳಿಸಿ ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮೊದಲ ಪಂದ್ಯದಲ್ಲಿ ಬೌಲಿಂಗ್ನಲ್ಲಿ ಹೆಚ್ಚು ಕಾಣಿಕೆ ನೀಡದ ಆಲ್ರೌಂಡರ್ ರವೀಂದ್ರ ಜಡೇಜ ಎರಡನೆ ಟೆಸ್ಟ್ನಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಕೊಹ್ಲಿ ಸ್ಪಿನ್ ಬೌಲಿಂಗ್ನಲ್ಲಿ ವಿಭಿನ್ನತೆ ತರಲು ಬಯಸಿದರೆ ಕುಲ್ದೀಪ್ ಯಾದವ್ಗೆ ಅವಕಾಶ ಪಡೆಯಬಹುದು. ತಮಿಳುನಾಡಿನ ಆಲ್ರೌಂಡರ್ ವಿಜಯ್ ಶಂಕರ್ ಚೊಚ್ಚಲ ಟೆಸ್ಟ್ ಪಂದ್ಯದ ನಿರೀಕ್ಷೆಯಲ್ಲಿದ್ದಾರೆ. ಶಂಕರ್ ಮಧ್ಯಮ ವೇಗದಲ್ಲಿ ಚೆನ್ನಾಗಿ ಬೌಲಿಂಗ್ ಮಾಡುತ್ತಾರೆ. ಅವರು 32 ಪ್ರಥಮ ದರ್ಜೆ ಪಂದ್ಯಗಳಲ್ಲಿ 27 ವಿಕೆಟ್ಗಳನ್ನು ಕಬಳಿಸಿದ್ದಾರೆ. ಬ್ಯಾಟಿಂಗ್ನಲ್ಲಿ 49.16ರ ಸರಾಸರಿಯಲ್ಲಿ 5 ಶತಕ ಹಾಗೂ 10 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಿರುವ ಕಾರಣ ಆರನೇ ಕ್ರಮಾಂಕದಲ್ಲಿ ಶಂಕರ್ಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ರಾಹುಲ್, ಚೇತೇಶ್ವರ ಪೂಜಾರ ಹಾಗೂ ನಾಯಕ ಕೊಹ್ಲಿ ಆತ್ಮವಿಶ್ವಾಸದೊಂದಿಗೆ ಎರಡನೆ ಪಂದ್ಯ ಆಡಲಿದ್ದಾರೆ. ಕೋಲ್ಕತಾ ಟೆಸ್ಟ್ನಲ್ಲಿ ಎರಡೂ ಇನಿಂಗ್ಸ್ಗಳಲ್ಲಿ ವಿಫಲವಾಗಿದ್ದ ಉಪ ನಾಯಕ ಅಜಿಂಕ್ಯ ರಹಾನೆ ಹಳೆ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಮೊದಲ ಟೆಸ್ಟ್ನ್ನು ಡ್ರಾಗೊಳಿಸಿದ ಸಂಭ್ರಮದಲ್ಲಿರುವ ಶ್ರೀಲಂಕಾ ಟೆಸ್ಟ್ನ ಮೊದಲ ನಾಲ್ಕು ದಿನ ಪ್ರಾಬಲ್ಯ ಸಾಧಿಸಿತ್ತು. ವೇಗಿಗಳ ಸ್ನೇಹಿ ಈಡನ್ಗಾರ್ಡನ್ಸ್ನಲ್ಲಿ ನೀರಸ ಪ್ರದರ್ಶನ ನೀಡಿದ್ದ ವೇಗಿ ಲಹಿರು ಗಾಮಗೆ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನ. ಗಾಮಗೆ ಮೊದಲ ಪಂದ್ಯದ 2 ಇನಿಂಗ್ಸ್ ಗಳಲ್ಲಿ 156 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದಿದ್ದರು. ಒಂದು ವೇಳೆ ಶ್ರೀಲಂಕಾ ಮೂವರು ವೇಗಿಗಳನ್ನು ಕಣಕ್ಕಿಳಿಸಿದರೆ ಎಡಗೈ ವೇಗಿ ವಿಶ್ವ ಫೆರ್ನಾಂಡೊ ಅವಕಾಶ ಪಡೆಯಬಹುದು. ಹೆಚ್ಚುವರಿ ಸ್ಪಿನ್ನರ್ಗೆ ಆದ್ಯತೆ ನೀಡಿದರೆ ಚೈನಾಮನ್ ಬೌಲರ್ ಲಕ್ಷಣ್ ಸಂಡಕನ್ಗೆ ಅವಕಾಶ ಲಭಿಸಬಹುದು. ಶ್ರೀಲಂಕಾ ಹೆಚ್ಚುವರಿ ಬ್ಯಾಟ್ಸ್ಮನ್ಗೆ ಆದ್ಯತೆ ನೀಡಿದರೆ ಶನಕ ಬದಲಿಗೆ ಧನಂಜಯ ಡಿ’ಸಿಲ್ವಾ ಆಡುವ ಸಾಧ್ಯತೆಯಿದೆ.
ತಂಡಗಳು
►ಭಾರತ: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ(ವಿಕೆಟ್ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಮುಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮ, ವಿಜಯ್ ಶಂಕರ್, ಕುಲ್ದೀಪ್ ಯಾದವ್, ರೋಹಿತ್ ಶರ್ಮ.
►ಶ್ರೀಲಂಕಾ: ದಿನೇಶ್ ಚಾಂಡಿಮಾಲ್(ನಾಯಕ), ಆ್ಯಂಜೆಲೊ ಮ್ಯಾಥ್ಯೂಸ್, ಡಿ.ಕರುಣರತ್ನೆ, ನಿರೊಶನ್ ಡಿಕ್ವೆಲ್ಲಾ, ಧನಂಜಯ್ ಡಿ ಸಿಲ್ವಾ, ಸುರಂಗ ಲಕ್ಮಲ್, ದಾಸುನ್ ಶನಕ, ವಿಶ್ವ ಫೆರ್ನಾಂಡೊ, ಲಹಿರು ಗಾಮಗೆ, ಲಕ್ಷಣ್ ಸಂಡಕನ್, ಸಮರವಿಕ್ರಮ, ದಿಲ್ರುವಾನ್ ಪೆರೇರ ಹಾಗೂ ರೋಶನ್ ಸಿಲ್ವಾ.