ನ್ಯೂಝಿಲ್ಯಾಂಡ್ ನಲ್ಲಿ ಭಾರತಕ್ಕೆ ಚೊಚ್ಚಲ ಸರಣಿ ಗೆಲುವಿನ ಚಿತ್ತ
ನಾಳೆ ಮೂರನೇ ಟ್ವೆಂಟಿ-20 ಪಂದ್ಯ
ಹ್ಯಾಮಿಲ್ಟನ್, ಜ.28: ಭಾರತ ಮತ್ತು ನ್ಯೂಝಿಲ್ಯಾಂಡ್ ತಂಡಗಳ ನಡುವಿನ ಮೂರನೇ ಟ್ವೆಂಟಿ-20 ಪಂದ್ಯ ಬುಧವಾರ ಇಲ್ಲಿ ನಡೆಯಲಿದ್ದು, ಭಾರತವು ಚೊಚ್ಚಲ ಟ್ವೆಂಟಿ-20 ಸರಣಿ ಗೆಲ್ಲುವ ಪ್ರಯತ್ನ ನಡೆಸಲಿದೆ.
ಐದು ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ ಎರಡು ಪಂದ್ಯಗಳಲ್ಲಿ ಜಯ ಗಳಿಸಿದ್ದು, ಇನ್ನೊಂದು ಪಂದ್ಯದಲ್ಲಿ ಜಯ ಗಳಿಸಿದರೆ ಸರಣಿ ಭಾರತಕ್ಕೆ ಒಲಿಯಲಿದೆ. ಆಕ್ಲೆಂಡ್ನಲ್ಲಿ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ಅಂತರದಲ್ಲಿ ಮತ್ತು 2ನೇ ಪಂದ್ಯದಲ್ಲಿ 7 ವಿಕೆಟ್ಗಳ ಅಂತರದಲ್ಲಿ ಜಯ ಗಳಿಸಿತ್ತು.
ಸೆಡ್ಡಾನ್ಪಾರ್ಕ್ನಲ್ಲಿ ನಡೆಯಲಿರುವ 3ನೇ ಪಂದ್ಯದಲ್ಲಿ ಭಾರತ ಜಯ ಗಳಿಸಿದರೆ ನ್ಯೂಝಿಲ್ಯಾಂಡ್ ನೆಲದಲ್ಲಿ ಮೊದಲ ಬಾರಿಗೆ ಟ್ವೆಂಟಿ-20 ಸರಣಿಯನ್ನು ಗೆದ್ದುಕೊಂಡಂತಾಗುತ್ತದೆ. ಈ ಹಿಂದೆ ಭಾರತ ಎರಡು ಸರಣಿಗಳಲ್ಲಿ ಸೋಲು ಅನುಭವಿಸಿತ್ತು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2008-09ರಲ್ಲಿ 0-2 ಮತ್ತು ಕಳೆದ ವರ್ಷ 1-2 ಅಂತರದಲ್ಲಿ ಭಾರತ ಸೋಲು ಅನುಭವಿಸಿತ್ತು.
2019ರ ವಿಶ್ವಕಪ್ ಬಳಿಕ ಭಾರತ ಐದು ಟ್ವೆಂಟಿ-20 ಸರಣಿಗಳಲ್ಲಿ ಅಜೇಯ ಗೆಲುವಿನ ದಾಖಲೆ ಮುಂದುವರಿಸಿದೆ. ಈ ಪೈಕಿ ನ್ಯೂಝಿಲ್ಯಾಂಡ್ ವಿರುದ್ಧ ಗೆಲುವು ಸೇರಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲಲಿಲ್ಲ. ಮೂರು ಪಂದ್ಯಗಳ ಸರಣಿಯಲ್ಲಿ 1-1 ಗೆಲುವಿನೊಂದಿಗೆ ಸಮಬಲ ಸಾಧಿಸಿತ್ತು. ಒಂದು ಪಂದ್ಯ ಮಳೆಯಿಂದ ಕೊಚ್ಚಿ ಹೋಗಿತ್ತು.
ಈಗ ಭಾರತ ಸರಣಿ ಜಯ ಗಳಿಸಿದರೆ ಐಸಿಸಿ ರ್ಯಾಂಕಿಂಗ್ನಲ್ಲಿ ದೊಡ್ಡ ಬದಲಾವಣೆಯಾಗದು. ಭಾರತ ಇದೀಗ ಐದನೇ ಸ್ಥಾನದಲ್ಲಿದೆ. 5 ಪಂದ್ಯಗಳ ಸರಣಿಯನ್ನು 5-0 ಅಂತರದಲ್ಲಿ ಜಯ ಗಳಿಸಿದರೆ ಭಾರತ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಡಲಿದೆ. ನ್ಯೂಝಿಲ್ಯಾಂಡ್ ಇದೀಗ ರ್ಯಾಂಕಿಂಗ್ನಲ್ಲಿ 6ನೇ ಸ್ಥಾನದಲ್ಲಿದೆ. ಪಾಕಿಸ್ತಾನ, ಆಸ್ಟ್ರೇಲಿಯ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಕ್ರಮವಾಗಿ ಅಗ್ರ ನಾಲ್ಕು ಸ್ಥಾನಗಳನ್ನು ಪಡೆದಿವೆ.
ಭಾರತಕ್ಕೆ ಮುಂಬರುವ ಟ್ವೆಂಟಿ-20 ವಿಶ್ವಕಪ್ ಗೆ ಅಣಿಯಾಗಲು ನ್ಯೂಝಿಲ್ಯಾಂಡ್ ವಿರುದ್ಧದ ಪ್ರವಾಸ ಸರಣಿ ಉತ್ತಮ ಅವಕಾಶವನ್ನು ಒದಗಿಸಿದೆ. ಲೋಕೇಶ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಕಳೆದ ಎರಡು ಪಂದ್ಯಗಳಲ್ಲಿ ಮಿಂಚಿದ್ದಾರೆ. ಮೂರನೇ ಪಂದ್ಯಕ್ಕೆ ಭಾರತದ ತಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಇಲ್ಲ. ಕಳೆದ ಪಂದ್ಯದಲ್ಲಿ ಆಡಿರುವ ಆಟಗಾರರೇ ಮೂರನೇ ಪಂದ್ಯಕ್ಕೂ ಮುಂದುವರಿಯುವುದನ್ನು ನಿರೀಕ್ಷಿಸಲಾಗಿದೆ. ಮಂಗಳವಾರ ನೆಟ್ ಪ್ರಾಕ್ಟೀಸ್ನಿಂದ ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ, ಯಜುವೇಂದ್ರ ಚಹಾಲ್, ಮುಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ದೂರ ಉಳಿದಿದ್ದರು.
ಈ ವರೆಗೆ ಆಡದಿರುವ ಆಟಗಾರರ ಅಭ್ಯಾಸದ ಕಡೆಗೆ ಕೋಚಿಂಗ್ ವಿಭಾಗ ಹೆಚ್ಚಿ ನ ಗಮನ ಹರಿಸಿತು. ರವಿ ಶಾಸ್ತ್ರಿ ಅವರು ವಾಶಿಂಗ್ಟನ್ ಸುಂದರ್ ಬೌಲಿಂಗ್ ಮತ್ತು ವಿಕ್ರಮ್ ರಾಠೋಡ್ ಅವರು ರಿಷಭ್ ಪಂತ್ ಬ್ಯಾಟಿಂಗ್ ಕಡೆಗೆ ಗಮನ ಹರಿಸಿದರು. ಆದರೆ ಇಬ್ಬರು ಆಟಗಾರರಿಗೆ ನಾಳಿನ ಪಂದ್ಯಕ್ಕೆ ಅವಕಾಶ ಸಿಗಲಾರದು. ಬೆಂಚ್ ಕಾಯಿಸುವುದು ಬಹುತೇಕ ಖಚಿತವಾಗಿದೆ.
ತಂಡದಲ್ಲಿ ಏಕೈಕ ಬದಲಾವಣೆ ಮಾಡುವ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿ ಯೋಚಿಸುತ್ತಿದೆ.ಕುಲದೀಪ್ ಯಾದವ್ ಕಳೆದ ಎರಡು ಪಂದ್ಯಗಳಲ್ಲಿ ದೂರ ಉಳಿದಿದ್ದರು. ಮೂರನೇ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ.
ನ್ಯೂಝಿಲ್ಯಾಂಡ್ ತಂಡದಲ್ಲಿ ಕಾಲಿನ್ ಗ್ರಾಂಡ್ಹೋಮ್ಗೆ ಇನ್ನೊಂದು ಬಾರಿ ಅಂತಿಮ 11 ರಲ್ಲಿ ಅವಕಾಶ ನಿರೀಕ್ಷಿಸಲಾಗಿದೆ. ಅವರು ಎರಡು ಪಂದ್ಯಗಳಲ್ಲಿ ಕ್ರಮವಾಗಿ 0 ಮತ್ತು 3 ರನ್ ಗಳಿಸಿದ್ದರು. ಈ ಕಾರಣದಿಂದಾಗಿ ಟಾಮ್ ಬ್ರೂಸ್ ಅವಕಾಶ ಪಡೆಯುವ ಸಾಧ್ಯತೆಯಿದೆ. ನ್ಯೂಝಿಲ್ಯಾಂಡ್ ಬೌಲಿಂಗ್ನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಭಾರತದ ಬ್ಯಾಂಟಿಂಗ್ಗೆ ಕಡಿವಾಣ ಹಾಕುವ ಬಗ್ಗೆ ಯೋಚಿಸುತ್ತಿದೆ. ಸೆಡ್ಡಾನ್ ಪಾರ್ಕ್ನಲ್ಲಿ ನ್ಯೂಝಿಲ್ಯಾಂಡ್ನ ಪ್ರದರ್ಶನ ಚೆನ್ನಾಗಿದೆ. ಇಲ್ಲಿ ನಡೆದ 9 ಪಂದ್ಯಗಳ ಪೈಕಿ ಏಳರಲ್ಲಿ ಜಯ ಗಳಿಸಿದೆ.
< ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಮನೀಷ್ ಪಾಂಡೆ, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಶಿವಮ್ ದುಬೆ, ರವೀಂದ್ರ ಜಡೇಜ, ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ಮುಹಮ್ಮದ್ ಶಮಿ , ಜಸ್ಪ್ರೀತ್ಬುಮ್ರಾ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್.
<ನ್ಯೂಝಿಲ್ಯಾಂಡ್ ತಂಡ : ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್, ಸ್ಕಾಟ್ ಕುಗ್ಗೆಲೀಜ್ನ್, ಕಾಲಿನ್ ಮುನ್ರೊ, ಕಾಲಿನ್ ಡಿ ಗ್ರಾಂಡ್ಹೋಮ್, ಟಾಮ್ ಬ್ರೂಸ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್ ), ಹಾಮೀಶ್ ಬೆನೆಟ್, ಇಶ್ ಸೋಧಿ, ಟಿಮ್ ಸೌಥಿ, ಬ್ಲೇರ್ ಟಿಕ್ನರ್.