ಇಂದು ಭಾರತ-ದ.ಆಫ್ರಿಕಾ ಮೊದಲ ಏಕದಿನ ಪಂದ್ಯ
ಧರ್ಮಶಾಲಾ, ಮಾ.11: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೊದಲ ಏಕದಿನ ಅಂತರ್ರಾಷ್ಟ್ರೀಯ ಪಂದ್ಯ ಧರ್ಮಶಾಲಾದಲ್ಲಿ ಗುರುವಾರ ನಡೆಯಲಿದ್ದು, ನ್ಯೂಝಿಲ್ಯಾಂಡ್ನಲ್ಲಿ ಆಗಿರುವ ಕಹಿ ಅನುಭವವನ್ನು ಮರೆತು ಗೆಲುವಿನ ಹಳಿಗೆ ಮರಳಲು ಟೀಮ್ ಇಂಡಿಯಾದ ಆಟಗಾರರು ಎದುರು ನೋಡುತ್ತಿದ್ದಾರೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಂತರ್ರಾಷ್ಟ್ರೀಯ ಕ್ರಿಕೆಟ್ಗೆ ಮರಳುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಮಹಾಮಾರಿ ಕೊರೋನ ವೈರಸ್ನ ಸೋಂಕು ಹರಡುತ್ತಿರುವುದು ಪಂದ್ಯಕ್ಕೂ ಬಿಸಿ ತಟ್ಟಿದೆ. ಇದೇ ವೇಳೆ ಮಳೆಯ ಭೀತಿ ಪಂದ್ಯಕ್ಕಿದೆ. ನ್ಯೂಝಿಲ್ಯಾಂಡ್ ವಿರುದ್ಧ ಕಳೆದ ಏಕದಿನ ಸರಣಿಯಲ್ಲಿ 0-3 ಅಂತರದಲ್ಲಿ ಸೋತಿದ್ದ ಭಾರತದ ತಂಡಕ್ಕೆ ತವರಿನಲ್ಲಿ ಉತ್ತಮ ಪ್ರದರ್ಶನದ ಮೂಲಕ ವೈಫಲ್ಯವನ್ನು ಸರಿಪಡಿಸುವ ಅವಕಾಶ ಸಿಕ್ಕಿದೆ.
ಕಳೆದ ವರ್ಷ ನಡೆದ ವಿಶ್ವಕಪ್ನಲ್ಲಿ ಮ್ಯಾಂಚೆಸ್ಟರ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಸೆಮಿಫೈನಲ್ನಲ್ಲಿ ಆಡಿರುವುದು ಪಾಂಡ್ಯ ಅವರ ಕೊನೆಯ ಪಂದ್ಯವಾಗಿದೆ. ಕಳೆದ ಸೆಪ್ಟಂಬರ್ನಲ್ಲಿ ಬೆಂಗಳೂರಿನಲ್ಲಿ ಪಾಂಡ್ಯ ದ.ಆಫ್ರಿಕಾ ವಿರುದ್ಧ ಟ್ವೆಂಟಿ-20 ಪಂದ್ಯವನ್ನಾಡಿದ್ದರು.
ನ್ಯೂಝಿಲ್ಯಾಂಡ್ನಲ್ಲಿ ಭಾರತ ಮೂರು ಏಕದಿನ ಮತ್ತು 2 ಟೆಸ್ಟ್ ಸೇರಿದಂತೆ 5 ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಕಳೆದುಕೊಂಡಿದೆ. ಕಳೆದ ಆರು ವರ್ಷಗಳಲ್ಲಿ ತಂಡ ಇಂತಹ ಹೀನಾಯ ಸೋಲು ಅನುಭವಿಸಿಲ್ಲ. ನಾಯಕ ಕೊಹ್ಲಿ ಸರಣಿಯಲ್ಲಿ ಕೇವಲ 75 ರನ್ ದಾಖಲಿಸಿದ್ದಾರೆ. ಅವರ ಫಾರ್ಮ್ನ ಬಗ್ಗೆ ಆತಂಕ ಉಂಟಾಗಿದೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆಗೆ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್, ವೇಗಿ ಭುವನೇಶ್ವರ ಕುಮಾರ್ ತಂಡಕ್ಕೆ ವಾಪಸಾಗಿದ್ದಾರೆ. ಮೂವರು ಆಟಗಾರರು ತಮ್ಮ ಸ್ಥಾನಗಳಲ್ಲಿ ಅಂತಿಮ ಹನ್ನೊಂದರಲ್ಲಿ ಆಡಲು ತಯಾರಾಗಿದ್ದಾರೆ. ಮನೀಷ್ ಪಾಂಡೆ ನಂ.6ರಲ್ಲಿ ಆಡಲಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಶಿಖರ್ ಧವನ್ ತಂಡಕ್ಕೆ ಉಪಯುಕ್ತ ಕೊಡುಗೆ ನೀಡುವುದನ್ನು ನಿರೀಕ್ಷಿಸಲಾಗಿದೆ. ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಂಡಿಲ್ಲ. ಶಿಖರ್ ಧವನ್ ನ್ಯೂಝಿಲ್ಯಾಂಡ್ ವಿರುದ್ಧ ಟ್ವೆಂಟಿ-20 ಮತ್ತು ಏಕದಿನ ಸರಣಿಗೆ ಇರಲಿಲ್ಲ. ಇವರ ಅನುಪಸ್ಥಿತಿ ತಂಡದ ಬ್ಯಾಟಿಂಗ್ ಸೊರಗಲು ಕಾರಣವಾಗಿತ್ತು. ಧವನ್ ಆಸ್ಟ್ರೇಲಿಯದ ವಿರುದ್ಧ ಏಕದಿನ ಸರಣಿಯಲ್ಲಿ ಭುಜನೋವಿನ ಸಮಸ್ಯೆ ಎದುರಿಸಿದ್ದರು. ಈ ಕಾರಣದಿಂದಾಗಿ ಅವರು ನ್ಯೂಝಿಲ್ಯಾಂಡ್ ವಿರುದ್ಧ ಯಾವ ಸರಣಿಯಲ್ಲೂ ಆಡಿರಲಿಲ್ಲ.
ಭುವನೇಶ್ವರ ಕುಮಾರ್ ತಂಡಕ್ಕೆ ಮರಳಿರುವುದು ತಂಡದ ಬೌಲಿಂಗ್ ವಿಭಾಗಕ್ಕೆ ಶಕ್ತಿ ತಂದಿದೆ. ಮುಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಶಮಿಗೆ ನ್ಯೂಝಿಲ್ಯಾಂಡ್ ವಿರುದ್ಧ ಎರಡನೇ ಟೆಸ್ಟ್ ನಲ್ಲಿ ಭುಜನೋವಿನ ಸಮಸ್ಯೆ ಕಾಣಿಸಿಕೊಂಡಿತ್ತು.
ಧರ್ಮಶಾಲಾ ಪಿಚ್ ವೇಗದ ಬೌಲರ್ಗಳಿಗೆ ಸ್ನೇಹಿಯಾಗಿದೆ. ಈ ಕಾರಣದಿಂದಾಗಿ ಆಲ್ರೌಂಡರ್ ರವೀಂದ್ರ ಜಡೇಜ ಏಕೈಕ ಸ್ಪಿನ್ನರ್ ಆಗಿ ಕಣಕ್ಕಿಳಿಯುವುದನ್ನು ನಿರೀಕ್ಷಿಸಲಾಗಿದೆ. ದಕ್ಷಿಣ ಆಫ್ರಿಕಾ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯ ವಿರುದ್ಧ 3-0 ಸರಣಿ ಗೆಲುವಿನೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿ ಕೊಂಡಿದೆ. ಭಾರತದ ವಿರುದ್ಧದ ಸರಣಿಗೆ ಎಫ್ ಡು ಪ್ಲೆಸಿಸ್ ಮತ್ತು ರಾಸೈ ವ್ಯಾನ್ ಡರ್ ಡುಸೆನ್ ಇದ್ದಾರೆ. ಆಸ್ಟ್ರೇಲಿಯ ವಿರುದ್ಧದ ಸರಣಿಗೆ ಇವರಿಗೆ ವಿಶ್ರಾಂತಿ ನೀಡಲಾಗಿತ್ತು. ಮಾಜಿ ನಾಯಕ ಎಫ್ ಡು ಪ್ಲೆಸಿಸ್ ಫಾರ್ಮ್ ಕಳೆದುಕೊಂಡಿದ್ದಾರೆ. ಭಾರತದ ವಿರುದ್ಧ ಪ್ಲೆಸಿಸ್ ಫಾರ್ಮ್ ಕಂಡುಕೊಳ್ಳುವುದನ್ನು ನಿರೀಕ್ಷಿಸಲಾಗಿದೆ.
► ಕೈಲ್ ವೆರೆನ್ನೆ ಮತ್ತು ಹೆನ್ರಿಕ್ ಕ್ಲಾಸೆನ್ ಆಸ್ಟ್ರೇಲಿಯ ವಿರುದ್ಧ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಅದೇ ಫಾರ್ಮ್ನ್ನು ಮುಂದುವರಿಸುವ ಸಾಧ್ಯತೆ ಇದೆ. ಟೆಂಬಾ ಬವುಮಾ ಗಾಯದಿಂದಾಗಿ ಆಸ್ಟ್ರೇಲಿಯ ವಿರುದ್ಧ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಅವರು ಇದೀಗ ತಂಡಕ್ಕೆ ವಾಪಸಾಗಿದ್ದಾರೆ. ಜನ್ನೆಮನ್ ಮಲಾನ್ ಮೊದಲ ಬಾರಿ ಭಾರತದಲ್ಲಿ ಆಡಲಿದ್ದಾರೆ. ಅವರು ಆಸ್ತ್ರೇಲಿಯ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿ ತಂಡದ ಗೆಲುವಿಗೆ ನೆರವಾಗಿದ್ದರು. ದಕ್ಷಿಣ ಆಫ್ರಿಕಾ ಮೊದಲ ಬಾರಿ ಧರ್ಮಶಾಲಾದಲ್ಲಿ ಆಡುತ್ತಿದೆ. ಭಾರತ ಇಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಜಯ ಮತ್ತು 2ರಲ್ಲಿ ಸೋಲುಭವಿಸಿತ್ತು. ಚೇಸಿಂಗ್ ಮಾಡುವ ತಂಡಕ್ಕೆ ಇಲ್ಲಿ ಗೆಲುವಿಗೆ ಉತ್ತಮ ಅವಕಾಶ ಇದೆ. ಭಾರತ-ದ.ಆಫ್ರಿಕಾ ಎರಡನೇ ಪಂದ್ಯ ಲಕ್ನೋದಲ್ಲಿ ಮಾ.15ರಂದು ಮತ್ತು ಮೂರನೇ ಪಂದ್ಯ ಕೋಲ್ಕತಾದಲ್ಲಿ ಮಾ.18ರಂದು ನಡೆಯಲಿದೆ. ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ ಧವನ್, ಪೃಥ್ವಿ ಶಾ, ಲೋಕೇಶ್ ರಾಹುಲ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್, ಯಜುವೇಂದ್ರ ಚಹಾಲ್, ಕುಲದೀಪ್ ಯಾದವ್, ಶುಭ್ಮನ್ ಗಿಲ್.
► ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ನಾಯಕ), ಟೆಂಬಾ ಬವುಮಾ, ರಾಸ್ಸಿ ವಾನ್ ಡೆರ್ ಡುಸೆನ್, ಫಾಫ್ ಡು ಪ್ಲೆಸಿಸ್, ಕೈಲ್ ವೆರೆನ್ನೆ, ಹೆನ್ರಿಕ್ ಕ್ಲಾಸೆನ್, ಜನ್ನೆಮನ್ ಮಲಾನ್,ಡೇವಿಡ್ ಮಿಲ್ಲರ್, ಜಾನ್-ಜಾನ್ ಸ್ಮಟ್ಸ್, ಆಂಡಿಲ್ ಫೆಹ್ಲುಕ್ವಾಯೊ, ಲುಂಗಿ ಗಿಡಿ, ಲುಥೋ ಸಿಪಮ್ಲಾ, ಬ್ಯೂರನ್ ಹೆಂಡ್ರಿಕ್ಸ್, ಆ್ಯನ್ರಿಚ್ ನೊರ್ಟ್ಜೆ,ಜಾರ್ಜ್ ಲಿಂಡೆ, ಕೇಶವ ಮಹಾರಾಜ್.