ಆರ್ಸಿಬಿ ಐಪಿಎಲ್ ಪ್ರಶಸ್ತಿ ಗೆಲ್ಲದಿರುವುದಕ್ಕೆ ಕೊಹ್ಲಿ ಹೊಣೆಗಾರರಾಗಬೇಕು: ಗಂಭೀರ್
ಹೊಸದಿಲ್ಲಿ: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸೋಲನುಭವಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯಿಂದ ಹೊರ ನಡೆದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ನಾಯಕನಾಗಿ ಎರಡು ಬಾರಿ ಐಪಿಎಲ್ ಪ್ರಶಸ್ತಿ ಜಯಿಸಿರುವ ಗೌತಮ್ ಗಂಭೀರ್, 8 ವರ್ಷಗಳಿಂದ ಆರ್ಸಿಬಿ ತಂಡದ ನಾಯಕನಾಗಿದ್ದರೂ ಆ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡಲು ವಿಫಲವಾಗಿರುವುದಕ್ಕೆ ವಿರಾಟ್ ಕೊಹ್ಲಿಯನ್ನು ಟೀಕಿಸಿದರು.
32ರ ಹರೆಯದ ಕೊಹ್ಲಿ ಆರ್ಸಿಬಿ ಈ ತನಕ ಐಪಿಎಲ್ ಪ್ರಶಸ್ತಿ ಗೆಲ್ಲದೇ ಇರುವುದಕ್ಕೆ ಜವಾಬ್ದಾರಿಯನ್ನು ಹೊರಬೇಕು ಎಂದು ಒತ್ತಾಯಿಸಿದರು.
"ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದಲ್ಲಿ ಎಂಎಸ್ ಧೋನಿ ಹಾಗೂ ರೋಹಿತ್ ಶರ್ಮಾ ದೀರ್ಘ ಸಮಯದಿಂದ ನಾಯಕರಾಗಿದ್ದಾರೆ. ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ಅವರು ನಾಯಕ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಒಂದು ವೇಳೆ ರೋಹಿತ್ 8 ವರ್ಷಗಳ ಕಾಲವು ಉತ್ತಮ ಪ್ರದರ್ಶನ ನೀಡದೇ ಇರುತ್ತಿದ್ದರೆ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಅವರನ್ನು ನಾಯಕನ ಸ್ಥಾನದಿಂದ ಹೊರಹಾಕುತ್ತಿತ್ತು. ತಂಡದ ನಾಯಕನಾಗಿ ಧೋನಿ 3 ಬಾರಿ ಐಪಿಎಲ್ ಪ್ರಶಸ್ತಿ ಜಯಿಸಿದ್ದರೆ, ರೋಹಿತ್ 4 ಬಾರಿ ಈ ಸಾಧನೆ ಮಾಡಿದ್ದಾರೆ'' ಎಂದರು.
"ಸಮಸ್ಯೆ ಹಾಗೂ ಹೊಣೆಗಾರಿಕೆ ಮ್ಯಾನೇಜ್ಮೆಂಟ್ ಅಥವಾ ಸಹಾಯಕ ಸಿಬ್ಬಂದಿಯಿಂದ ಆರಂಭವಾಗುವುದಲ್ಲ. ನಾಯಕನಿಂದ ಇದು ಆರಂಭವಾಗಬೇಕು. ನೀವು ನಾಯಕ. ನೀವು ತಂಡದ ಗೆಲುವಿನ ಶ್ರೇಯಸ್ಸು ಪಡೆಯುತ್ತೀರಾದರೆ, ಟೀಕೆಗಳನ್ನು ಸ್ವೀಕರಿಸಬೇಕಾಗುತ್ತದೆ'' ಎಂದು ಕೊಹ್ಲಿಯನ್ನು ಉದ್ದೇಶಿಸಿ ಕ್ರಿಸ್ ಇನ್ಫೋಗೆ ಗಂಭೀರ್ ತಿಳಿಸಿದರು.