ನಟರಾಜನ್ರನ್ನು ವಿಜಯ ಹಝಾರೆ ಟ್ರೋಫಿ ತಂಡದಿಂದ ಬಿಡುಗಡೆ ಮಾಡಿದ ತಮಿಳುನಾಡು
ಚೆನ್ನೆ: ಭಾರತದ ಯುವ ವೇಗದ ಬೌಲರ್ ಟಿ.ನಟರಾಜನ್ ಅವರನ್ನು ಬಿಸಿಸಿಐ ಕೋರಿಕೆಯ ಮೇರೆಗೆ ವಿಜಯ ಹಝಾರೆ ಟ್ರೋಫಿಗಾಗಿ ಆಯ್ಕೆ ಮಾಡಿರುವ ತಮಿಳುನಾಡಿನ ತಂಡದಿಂದ ಬಿಡುಗಡೆಗೊಳಿಸಲಾಗಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಸರಣಿಗೆ ಮೊದಲು ನಟರಾಜನ್ ಚೆನ್ನಾಗಿರುವುದನ್ನು ಬಿಸಿಸಿಐ ಬಯಸುತ್ತಿದೆ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆ(ಟಿಎನ್ ಸಿಎ)ಗುರುವಾರ ತಿಳಿಸಿದೆ. ಇಂಗ್ಲೆಂಡ್ ವಿರುದ್ದ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ನಟರಾಜನ್ ಫಿಟ್ ಆಗಿರುವುದನ್ನು ಬಿಸಿಸಿಐ ಹಾಗೂ ಭಾರತೀಯ ಟೀಮ್ ಮ್ಯಾನೇಜ್ ಮೆಂಟ್ ಬಯಸಿದ್ದು, ಭಾರತೀಯ ಕ್ರಿಕೆಟ್ ತಂಡದ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಇದಕ್ಕೆ ನಾವು ಸಮ್ಮತಿ ನೀಡಿದ್ದೇವೆ ಎಂದು ಟಿಎನ್ ಸಿಎ ಕಾರ್ಯದರ್ಶಿ ಆರ್.ಎಸ್. ರಾಮಸ್ವಾಮಿ ಪಿಟಿಐಗೆ ತಿಳಿಸಿದ್ದಾರೆ.
ತಮಿಳುನಾಡು ತಂಡ ಫೆಬ್ರವರಿ 20ರಿಂದ ಆರಂಭವಾಗಲಿರುವ ವಿಜಯ ಹಝಾರೆ ಟ್ರೋಫಿಗಾಗಿ ಆಯ್ಕೆ ಮಾಡಿರುವ 20 ಸದಸ್ಯರ ತಂಡದಲ್ಲಿ ನಟರಾಜನ್ ರಿಂದ ತೆರವಾದ ಸ್ಥಾನವನ್ನು ಜಗನ್ನಾಥ ಶ್ರೀನಿವಾಸ್ ತುಂಬಲಿದ್ದಾರೆ. ತಮಿಳುನಾಡು ಅಹಮದಾಬಾದ್ ನಲ್ಲಿ ಇತ್ತೀಚೆಗೆ ಕೊನೆಗೊಂಡಿದ್ದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದುಕೊಂಡಿತ್ತು.