ಫಿಫಾ ಮನಗೆದ್ದ ಭಾರತ ತಂಡ
ಕೋಲ್ಕತಾ, ಅ.15: ಈಗ ನಡೆಯುತ್ತಿರುವ ಫಿಫಾ ವಿಶ್ವಕಪ್ನಲ್ಲಿ ಆತಿಥೇಯ ಭಾರತ ತಂಡ ಗ್ರೂಪ್ ಹಂತದಲ್ಲಿ ಒಂದೂ ಪಂದ್ಯವನ್ನು ಜಯಿಸದೇ ಟೂರ್ನಿಯಿಂದ ಹೊರ ನಡೆದಿದ್ದರೂ ಫಿಫಾ ಅಧಿಕಾರಿಯ ಮನ ಗೆಲ್ಲಲು ಯಶಸ್ವಿಯಾಗಿದೆ. ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ 3-0 ಅಂತರದಿಂದ ಸೋತಿದ್ದ ಭಾರತ ತನ್ನ 2ನೆ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಹೋರಾಟ ನಡೆಸಿ ಒಂದು ಹಂತದಲ್ಲಿ ಸಮಬಲ ಸಾಧಿಸಿತು. ಆದರೆ, ಕೊನೆಯ ಕ್ಷಣದಲ್ಲಿ ಗೋಲು ಬಿಟ್ಟುಕೊಟ್ಟು ಫಿಫಾ ಟೂರ್ನಿಯಲ್ಲಿ ಮೊದಲ ಬಾರಿ ಅಂಕ ಗಳಿಸುವ ಅವಕಾಶ ವಂಚಿತವಾಗಿತ್ತು. ‘‘ಭಾರತ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಕೊಲಂಬಿಯಾ ವಿರುದ್ಧ ಅಪೂರ್ವ ಪ್ರದರ್ಶನ ನೀಡಿತ್ತು. ಈ ತಂಡ ತಾಂತ್ರಿಕವಾಗಿ ಸಂಘಟಿತವಾಗಿದ್ದು, ಫಿಟ್ನೆಸ್ನಲ್ಲಿ ಉತ್ತಮ ತಯಾರಿ ನಡೆಸಿದೆ. ಭಾರತೀಯರು ಕೆಲವು ಸ್ಕೋರ್ ಅವಕಾಶ ಸೃಷ್ಟಿಸಿದ್ದರು. ಭಾರತ ಭವಿಷ್ಯದ ಬಗ್ಗೆ ತಯಾರಿ ನಡೆಸಬೇಕು’’ ಎಂದು ಫಿಫಾ ಅಧಿಕಾರಿ ಬ್ರಾನಿಮಿರ್ ಉಜ್ವೆವಿಕ್ ಹೇಳಿದ್ದಾರೆ.
Next Story