ಮುನಿಸಿಪಲ್ ಕಚೇರಿಯಲ್ಲಿ ರಾಷ್ಟ್ರಗೀತೆ, ವಂದೇಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿದ ನಗರಾಡಳಿತ
ಜೈಪುರ, ಅ.31: ಮುಖ್ಯ ಕಾರ್ಯಾಲಯದಲ್ಲಿ ಪ್ರತಿದಿನ ಬೆಳಗ್ಗೆ ರಾಷ್ಟ್ರಗೀತೆ ಹಾಗೂ ಸಂಜೆ ವಂದೇಮಾತರಂ ಅನ್ನು ಕಡ್ಡಾಯವಾಗಿ ಉದ್ಯೋಗಿಗಳು ಹಾಡಬೇಕೆಂದು ಜೈಪುರ ಮುನಿಸಿಪಲ್ ಕಾರ್ಪೊರೇಶನ್ ಮಂಗಳವಾರ ಆದೇಶ ಹೊರಡಿಸಿದೆ. ತನ್ನ ಉದ್ಯೋಗಿಗಳಲ್ಲಿ 'ದೇಶಭಕ್ತಿಯ ಭಾವನೆಯನ್ನು ಜಾಗೃತಗೊಳಿಸಲು' ಇದು ಅಗತ್ಯವಾಗಿದೆ ಎಂದೂ ಆದೇಶ ತಿಳಿಸಿದೆ.
ರಾಷ್ಟ್ರಗೀತೆಯನ್ನು ಬೆಳಗ್ಗೆ 9:50ಕ್ಕೆ ಹಾಡಲಾಗುವುದಾದರೆ, ನಾಡಗೀತೆಯನ್ನು ಸಂಜೆ 5:55ಕ್ಕೆ ಹಾಡಲಾಗುವುದು. ಈ ಆದೇಶ ಇಂದಿನಿಂದಲೇ ಜಾರಿಗೆ ಬರುವುದು ಎಂದು ಹೇಳಲಾಗಿದೆ. ಎಲ್ಲಾ ಉದ್ಯೋಗಿಗಳು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಕಡೆ ಹಾಜರಿರಬೇಕು ಎಂದು ಹೇಳಲಾಗಿದೆ. ಇಂದು ಬೆಳಗ್ಗೆ ಸುಮಾರು 300 ಉದ್ಯೋಗಿಗಳು ರಾಷ್ಟ್ರಗೀತೆ ಹಾಡಿದ್ದಾರೆ.
ಅಕ್ಟೋಬರ್ 30ರಂದು ಹೊರಡಿಸಲಾದ ಆದೇಶಕ್ಕೆ ಜೈಪುರ ಮುನಿಸಿಪಲ್ ಕಾರ್ಪೊರೇಶನ್ನಿನ ಹೆಚ್ಚುವರಿ ಆಯುಕ್ತರು ಸಹಿ ಹಾಕಿದ್ದು ಅದಕ್ಕೆ ಜೈಪುರ ಮೇಯರ್ ಮತ್ತು ಆಯುಕ್ತರ ಅನುಮೋದನೆಯಿದೆಯೆಂದೂ ಆದೇಶದಲ್ಲಿ ತಿಳಿಸಲಾಗಿದೆ. ಸಿಬ್ಬಂದಿಯಲ್ಲಿ ಶಿಸ್ತು ಬೆಳೆಸಲು ಮತ್ತು ಉತ್ತಮ ಉದ್ಯೋಗ ಸ್ಥಳ ವಾತಾವರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.