ಅಡ್ವಾಣಿ, ಜೋಷಿಯ ಮೂಲೆಗುಂಪು: ಪ್ರಧಾನಿ, ಅಮಿತ್ ಶಾಗೆ ಶತ್ರುಘ್ನ ಸಿನ್ಹಾ ತರಾಟೆ
ಹೊಸದಿಲ್ಲಿ,ಡಿ.5: ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಷಿ ಮತ್ತು ಯಶವಂತ ಸಿನ್ಹಾರಂತಹ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷಾಧ್ಯಕ್ಷ ಅಮಿತ್ ಶಾ ಅವರನ್ನು ಬಿಜೆಪಿಯ ಸಂಸದ ಶತ್ರುಘ್ನ ಸಿನ್ಹಾ ಅವರು ಮಂಗಳವಾರ ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.
ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ಸ್ವತಃ ತಾನು ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಎತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸದ್ದಕ್ಕಾಗಿ ಹೆಸರುಗಳನ್ನು ಪ್ರಸ್ತಾಪಿಸದೆ ಮೋದಿ ಮತ್ತು ಅಮಿತ್ ಶಾ ಅವರನ್ನು ಶತ್ರುಘ್ನ ಸಿನ್ಹಾ ಟೀಕಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೇರಲು ಸಜ್ಜಾಗಿರುವ ರಾಹುಲ್ ಗಾಂಧಿ ವಿರುದ್ಧ ಮಹಾರಾಷ್ಟ್ರದ ಪರಿತ್ಯಕ್ತ ಕಾಂಗ್ರೆಸ್ ನಾಯಕ ಶಹಜಾದ್ ಪೂನಾವಾಲಾ ಅವರ ಆಕ್ರೋಶವನ್ನು ಬಿಜೆಪಿ ನಾಯಕರು ಬಳಸಿಕೊಂಡಿದ್ದನ್ನು ಪ್ರಸ್ತಾಪಿಸಿದ ಸಿನ್ಹಾ, "ಪೂನಾವಾಲಾ ತನ್ನ ಹತಾಶೆಯನ್ನು ತೋಡಿಕೊಂಡಿದ್ದರು ಮತ್ತು ಅದು ಸ್ಪಷ್ಟವಾಗಿ ಕಾಂಗ್ರೆಸಿನ ಆಂತರಿಕ ವಿಷಯವಾಗಿತ್ತು. ಅದಕ್ಕೆ ತಪ್ಪು ಮಾಹಿತಿ ಅಥವಾ ಸಿಟ್ಟು ಮತ್ತು ಗೊಂದಲ ಕಾರಣವಾಗಿರಬಹುದು, ನಮ್ಮ ಕೆಲವು ನಾಯಕರು ಮುಂದಾಗಿ ರಾಹುಲ್ ಭಡ್ತಿ ಕುರಿತು ಪೂನಾವಾಲಾ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ" ಎಂದು ಸರಣಿ ಟ್ವೀಟ್ಗಳಲ್ಲಿ ಸಿನ್ಹಾ ಹೇಳಿದ್ದಾರೆ.
ಇನ್ನೊಂದೆಡೆ ನಮ್ಮದೇ ಆದ ‘ಏಕವ್ಯಕ್ತಿ ಪ್ರದರ್ಶನ ಮತ್ತು ಇಬ್ಬರು ವ್ಯಕ್ತಿಗಳ ಸೇನೆ(ಮೋದಿ ಮತ್ತು ಶಾ)’ ಆಡ್ವಾಣಿ, ಜೋಷಿ ಮತ್ತು ಕೀರ್ತಿ ಆಝಾದ್ರಂತಹ ನಾಯಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದಿರುವ ಅವರು, ಸಿನ್ಹಾ, ಶೌರಿ ಎತ್ತಿರುವ ಪ್ರಶ್ನೆಗಳಿಗೆ ನಾಯಕತ್ವವೇಕೆ ಉತ್ತರಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.