ಮನಮೋಹನ್ ಸಿಂಗ್ ಮೌನ ಸಾಧಿಸಿದ್ದನ್ನು ಬಿಜೆಪಿಯ ಅಬ್ಬರ ಸಾಧಿಸಲಾಗಲಿಲ್ಲ : ನವಜೋತ್ ಸಿಂಗ್ ಸಿಧು
ಅಮೃತಸರ,ಮಾ.19: "ಮನಮೋಹನ್ ಸಿಂಗ್ ಬಗ್ಗೆ ಈ ಹಿಂದೆ ನೀಡಿದ್ದ ಹೇಳಿಕೆಗೆ ನಾನು ತಲೆ ತಗ್ಗಿಸಿಕೊಂಡು ಕ್ಷಮೆ ಯಾಚಿಸುತ್ತೇನೆ. ನಿಮ್ಮ 'ಮೌನ' ಸಾಧಿಸಿದ್ದನ್ನು ಸದ್ದುಗದ್ದಲದ ಬಿಜೆಪಿ ಸಾಧಿಸಲು ಸಾಧ್ಯವಾಗಲಿಲ್ಲ" ಎಂದು ಪಂಜಾಬ್ ಸ್ಥಳೀಯಾಡಳಿತ ಸಚಿವ ಹಾಗೂ ಮಾಜಿ ಕ್ರಿಕೆಟರ್ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ಮನಮೋಹನ್ ಸಿಂಗ್ ಸರ್ದಾರ್ ಹಾಗೂ ಅಸರ್ದಾರ್ (ಪರಿಣಾಮಕಾರಿ) ಎಂದು ಸಿಧು ಬಣ್ಣಿಸಿದ್ದಾರೆ. "ಹತ್ತು ವರ್ಷದ ಬಳಿಕ ಯುಪಿಎ ಸಾಧನೆ ನನಗೆ ಮನದಟ್ಟಾಗಿದೆ. ಬೆಟರ್ ಲೇಟ್ ದೆನ್ ನೆವರ್ ಎಂದು ನೀವು ಹೇಳುತ್ತೀರಿ. ನಿಮ್ಮ ಮೌನದ ಬಗ್ಗೆ ಒಂದಷ್ಟು ಹೇಳಲು ಬಯಸುತ್ತೇನೆ ಎಂದು ಎಂಎಂಎಸ್ ಬಗ್ಗೆ ಉರ್ದು ಕವಿತೆ ಹಾಡಿದರು."ಪರಿಂದೋಂ ಕಿ ಮಂಝಿಲ್ ಮಿಲೇಗಿ ಹಮೇಶಾ, ಯಹ್ ಪೆಹೈಲೆ ಹುಯೆ ಉನ್ಕೆ ಪಂಖ್ ಬೋಲ್ತೆ ಹೈ/ ವೋಹಿ ಲಗ್ ರೆಹ್ತೆ ಖಮೋಶ್ ಅಕ್ಸರ್, ಜಮಾನೆ ಮೇ ಜಿನ್ಕೆ ಹುನಾರ್ ಬೋಲ್ತೆ ಹೆ" (ಆ ಹಕ್ಕಿ ಅದರ ಗಮ್ಯಸ್ಥಾನ ತಲುಪಿತು, ಬಡಿಯುವ ರೆಕ್ಕೆಯಿಂದ ಇದು ತಿಳಿಯುತ್ತದೆ/ ಆದರೆ ಮೌನವಾಗಿರುವವರ ಕ್ರಿಯೆಗಳು ವಿಶ್ವದೆಲ್ಲೆಡೆ ರಿಂಗಣಿಸುತ್ತವೆ)
ಮಾಜಿ ಪ್ರಧಾನಿಯ ಗುಣಗಾನ ಮಾಡಿದ ಸಿಧು, "ಸರ್ ನೀವು ಜ್ಯೋತಿಷಿಯಾಗಬಹುದು; ಶೇಕಡ 2ರಷ್ಟು ಜಿಡಿಪಿ ಪ್ರಗತಿ ಕುಸಿಯುತ್ತದೆ ಎಂದು ನೀವು ನುಡಿದ ಭವಿಷ್ಯ ನಿಜವಾಗಿದೆ. ನಿಮ್ಮ ಅವಧಿಯಲ್ಲಿ ಆರ್ಥಿಕತೆ ಅರಬ್ಬಿ ಸಮುದ್ರದ ರಭಸದಂತಿತ್ತು. ಆದರೆ ಇಂದು ಆಮೆವೇಗಕ್ಕೆ ಬಂದಿದೆ" ಎಂದು ವಿಶ್ಲೇಷಿಸಿದರು.
ಬಿಜೆಪಿ ಸಂಸದರಾಗಿದ್ದಾಗ ಸಿಧು, ಮನಮೋಹನ್ ಸಿಂಗ್ ಕುರಿತು "ಪಪ್ಪು ಪಿಎಂ" ಎಂದು ವ್ಯಂಗ್ಯವಾಡಿ, ಅವರೊಬ್ಬ ಸರ್ದಾರ್ ಆಗಿದ್ದಾರೆಯೇ ವಿನಃ ಅಸರ್ದಾರ್ ಆಗಲಾರರು ಎಂದು ಹೇಳಿಕೆ ನೀಡಿದ್ದರು.