ಜೈಶ್ರೀರಾಂ ಘೋಷಣೆ ಕೂಗಿ ನಮಾಝ್ ಮಾಡುತ್ತಿದ್ದವರಿಗೆ ಅಡ್ಡಿಪಡಿಸಿದ 6 ಮಂದಿಯ ಬಂಧನ
ಗುರುಗ್ರಾಮ್, ಎ.27: ಮೈದಾನದಲ್ಲಿ ನಮಾಝ್ ಮಾಡುತ್ತಿದ್ದವರನ್ನು ತಡೆದ ಹಾಗು ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಗುರುಗ್ರಾಮ್ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಅರುಣ್, ಮನೀಶ್, ದೀಪಕ್, ಮೋಹಿತ್, ರವೀಂದರ್ ಹಾಗು ಮೋನು ಎಂದು ಗುರುತಿಸಲಾಗಿದೆ.
ನೂರಾರು ಮಂದಿ ಮೈದಾನದಲ್ಲಿ ನಮಾಝ್ ಮಾಡುತ್ತಿದ್ದ ಸಂದರ್ಭ ಸ್ಥಳಕ್ಕಾಗಮಿಸಿದ್ದ ದುಷ್ಕರ್ಮಿಗಳು ನಮಾಝ್ ಗೆ ಅಡ್ಡಿಪಡಿಸಿದರು. ಈ ಸಂದರ್ಭ “ಜೈ ಶ್ರೀ ರಾಮ್” ಹಾಗು “ಬಂಕೆ ಬಿಹಾರಿ ಕಿ ಜೈ” ಎನ್ನುವ ಘೋಷಣೆಗಳನ್ನು ಕೂಗಲಾಗಿತ್ತು ಎಂದು ಆರೋಪಿಸಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಭವಿಷ್ಯದಲ್ಲಿ ಮೈದಾನದಲ್ಲಿ ನಮಾಝ್ ಮಾಡದಂತೆ ಹಲವು ಮುಸ್ಲಿಮರು ಈ ಘಟನೆಯ ನಂತರ ತನ್ನಲ್ಲಿ ವಿನಂತಿಸಿದರು ಎಂದು ಇಮಾಮ್ ಹಫೀಝ್ ಖಾಲಿದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
“ಮೂರು ವಾರಗಳ ಹಿಂದೆ ನಮಾಝ್ ಮಾಡಿದ ನಂತರ ನಾನು ಹಾಗು ಮತ್ತೊಬ್ಬ ವ್ಯಕ್ತಿ ಚಾಪೆಗಳನ್ನು ಮಡಚುತ್ತಿದ್ದೆವು. ಆಗ ಸ್ಥಳಕ್ಕಾಗಮಿಸಿದ ಹಲವರು ನಮಾಝ್ ಮಾಡಕೂಡದು ಎಂದು ಎಚ್ಚರಿಸಿದರು. ಆದರೆ ನಾವು ಎಂದಿನಂತೆ ನಮಾಝ್ ಮಾಡುತ್ತಿದ್ದೆವು. ಕಳೆದ ಶುಕ್ರವಾರ ಹಲವರು ನಾವು ನಮಾಝ್ ಮಾಡಲು ಸಿದ್ಧತೆ ನಡೆಸುತ್ತಿದ್ದಾಗ ಸ್ಥಳಕ್ಕಾಗಮಿಸಿದರು. ನನ್ನಿಂದ ಮೈಕ್ರೋಫೋನನ್ನು ಕಿತ್ತು ನಮಾಝ್ ಗೆ ಅಡ್ಡಿಪಡಿಸಿದರು” ಎಂದು ಖಾಲಿದ್ ವಿವರಿಸಿದ್ದಾರೆ.
ಹಾಝಿದ್ ಶಹ್ ಝಾದ್ ಖಾನ್ ಎಂಬವರು ನೀಡಿದ ದೂರಿನ ನಂತರ ಎಫ್ ಐಆರ್ ದಾಖಲಾಗಿತ್ತು.