ಹನುಮಂತ ಜಗತ್ತಿನ ಮೊದಲ ಬುಡಕಟ್ಟು ವ್ಯಕ್ತಿ ಎಂದ ಬಿಜೆಪಿ ಶಾಸಕ
ಜೈಪುರ, ಮೇ 27: ಹನುಮಂತ ಜಗತ್ತಿನ ಮೊದಲ ಬುಡಕಟ್ಟು ವ್ಯಕ್ತಿ ಎಂದು ರಾಜಸ್ಥಾನದ ಅಲ್ವಾರ್ನ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜ ತಿಳಿಸಿದ್ದಾರೆ. ಅಹುಜ ಪ್ರಕಾರ, ಶ್ರೀರಾಮನಿಂದ ತರಬೇತಿ ಪಡೆದ ಆದಿವಾಸಿಗಳ ಸೇನೆಯನ್ನು ಹನುಮಂತ ನಿರ್ಮಿಸಿದ ಕಾರಣ ಆತನನ್ನು ದೇಶದ ಬುಡಕಟ್ಟು ಜನಾಂಗದವರು ಬಹುವಾಗಿ ಪೂಜಿಸುತ್ತಾರೆ. ಎಪ್ರಿಲ್ 2ರಂದು ನಡೆದ ಭಾರತ್ ಬಂದ್ ಸಮಯದಲ್ಲಿ ಹನುಮಂತನ ಫೋಟೊಗೆ ಅವಮಾನ ಮಾಡಿರುವುದನ್ನು ಕಂಡು ಬಹಳ ದುಃಖವಾಯಿತು ಎಂದು ಅಹುಜ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಸಂವಾದ ನಡೆಸಿದ ಅಹುಜ, ನಾನು ಈ ಬಗ್ಗೆ ಬಿಜೆಪಿ ಸಂಸದ ಕಿರೊರಿ ಕಾಲ್ ಮೀನಾ ಅವರೊಂದಿಗೆ ಮಾತನಾಡಿದ್ದು, ನೀವು ನಿಮ್ಮನ್ನು ಬುಡಕಟ್ಟು ವ್ಯಕ್ತಿ ಎಂದು ಹೇಳುತ್ತೀರಿ. ಆದರೆ ಹನುಮಂತನಿಗೆ ಅವಮಾನ ಮಾಡಿರುವ ಕಾರಣಕ್ಕೆ ನಿಮಗೆ ನಾಚಿಕೆಯಾಗಬೇಕು ಎಂದು ತಿಳಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಅಹುಜ ವಿವಾದಾತ್ಮಕ ಹೇಳಿಕೆ ನೀಡುವುದು ಇದೇ ಮೊದಲೇನಲ್ಲ. ಜೆಎನ್ಯು ಕ್ಯಾಂಪಸ್ನಲ್ಲಿ ಪ್ರತಿದಿನ 3,000 ಕಾಂಡೊಮ್ಗಳು ಮತ್ತು 2,000 ಮದ್ಯದ ಬಾಟಲಿಗಳು ಸಿಗುತ್ತವೆ ಎಂದು 2016ರ ಫೆಬ್ರವರಿಯಲ್ಲಿ ಅಹುಜ ಹೇಳಿಕೆ ನೀಡಿದ್ದರು. 2017ರ ಡಿಸೆಂಬರ್ನಲ್ಲಿ ನೀಡಿದ ಹೇಳಿಕೆಯಲ್ಲಿ, ಗೋಹತ್ಯೆ ಮತ್ತು ಕಳ್ಳಸಾಗಾಟದಲ್ಲಿ ತೊಡಗಿರುವವರನ್ನು ಅದೇ ರೀತಿ ಹತ್ಯೆ ಮಾಡಬೇಕೆಂದು ಅಹುಜ ತಿಳಿಸಿದ್ದರು.