ಯುವತಿ, ಪ್ರಿಯಕರನನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ದುಷ್ಕರ್ಮಿಗಳು
ಉದಯಪುರ್, ಜು. 7 : ಕೈಲಾಶಪುರಿ ಎಂಬಲ್ಲಿನ ಸಾರೆಖುರ್ದ್ ಗ್ರಾಮದ ದಾನ ಕಿ ಭಗಲ್ ಎಂಬ ಪ್ರದೇಶದಲ್ಲಿ 23 ವರ್ಷದ ಯುವತಿ ಮತ್ತಾಕೆಯ 22 ವರ್ಷದ ಪ್ರಿಯತಮನನ್ನು ಆಕೆಯ ಮಾಜಿ ಪತಿಯ ನೇತೃತ್ವದ ಗುಂಪೊಂದು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಆಘಾತಕಾರಿ ಘಟನೆ ವರದಿಯಾಗಿದೆ.
ಇಡೀ ಘಟನೆಯ ವೀಡಿಯೊವನ್ನು ಯುವತಿಯ ಮಾಜಿ ಪತಿ ಚಿತ್ರೀಕರಿಸಿದ್ದು, ಮೆರವಣಿಗೆಯ ವೇಳೆ ಫೋಟೊ ಕೂಡ ಕ್ಲಿಕ್ಕಿಸಿ ಜೋಡಿಯನ್ನು ನಿಂದಿಸಿ ವ್ಯಂಗ್ಯವಾಡಲಾಗಿದೆ.
ಪೊಲೀಸರಿಗೆ ಮಾಹಿತಿ ಹೋಗುತ್ತಲೇ ಅವರು ಸ್ಥಳಕ್ಕೆ ಆಗಮಿಸಿ ಯುವ ಜೋಡಿಯನ್ನು ರಕ್ಷಿಸಿ ಯುವತಿಯ ಮಾಜಿ ಪತಿಯನ್ನು ಬಂಧಿಸಿದ್ದಾರೆ. ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧ ಮುಂದುವರಿದಿದೆ.
ಯುವತಿಯ ಮೊದಲ ವಿವಾಹ ಆರೋಪಿ ತಾರು ಗಮೇಟಿಯೊಂದಿಗೆ ಐದು ವರ್ಷಗಳ ಹಿಂದೆ ನಡೆದಿತ್ತು. ಛೂಟ್ ಪಲ್ಲ ಎಂಬ ಆದಿವಾಸಿ ಪದ್ಧತಿಯಂತೆ ಅವರಿಬ್ಬರೂ ಪ್ರತ್ಯೇಕಗೊಂಡ ನಂತರ ಯುವತಿ ಮಂಗಿಲಾಲ್ ಗಮೇಟಿ ಎಂಬಾತನನ್ನು ವಿವಾಹವಾಗಿದ್ದಳು. ಆಕೆಗೆ ಮೊದಲ ವಿವಾಹವಾಗಿದ್ದ ಸಂದರ್ಭವೇ ರಾಮಲಾಲ್ ಗಮೇಟಿ ಎಂಬಾತನೊಂದಿಗೆ ಪ್ರೇಮ ಸಂಬಂಧವಿತ್ತೆನ್ನಲಾಗಿದ್ದು ಎರಡನೇ ವಿವಾಹವಾದ ನಂತರವೂ ಆಕೆ ಆತನೊಡನೆ ಸಂಪರ್ಕದಿಂದಿದ್ದಳು. ಗುರುವಾರ ಆಕೆ ಸಾರೆಖುರ್ದ್ ಗ್ರಾಮಕ್ಕೆ ಆತನನ್ನು ಭೇಟಿಯಾಗಲು ಬಂದಿರುವುದನ್ನು ಹಾಗೂ ಓಡಿ ಹೋಗಿ ಮದುವೆಯಾಗಲಿದ್ದಾರೆಂದು ತಿಳಿದ ಆಕೆಯ ಮಾಜಿ ಪತಿ ತನ್ನ ಚಿಕ್ಕಪ್ಪ ಲಾಲುರಾಮ್ ಹಾಗೂ ಗೆಳೆಯ ಹರೀಶ್ ಜತೆ ಸೇರಿ ಅವರನ್ನು ವಿವಸ್ತ್ರಗೊಳಿಸಿ ಹಗ್ಗದಿಂದ ಕಟ್ಟಿ ನಂತರ ಇಡೀ ಗ್ರಾಮದಲ್ಲಿ ಮೆರವಣಿಗೆ ನಡೆಸಿದ್ದರು.