ಸಂಜಯ್ ದತ್ ಮಾದಕ ವ್ಯಸನಿ, ಲಂಪಟ, ಕ್ರಿಮಿನಲ್: ಆರೆಸ್ಸೆಸ್ ಮುಖವಾಣಿ
ಮುಂಬೈ, ಜು. 13: ಹಿಂದಿ ಚಿತ್ರರಂಗ ಕಳಂಕಿತ ವ್ಯಕ್ತಿತ್ವದ ಬಗ್ಗೆ ಯಾಕೆ ಆಕರ್ಷಿತವಾಗುತ್ತಿದೆ ಎಂದು ಪ್ರಶ್ನಿಸಿರುವ ಆರೆಸ್ಸೆಸ್ ಮುಖವಾಣಿ ಪಾಂಚಜನ್ಯ, ಸಂಜಯ್ ದತ್ ಅವರ ಜೀವನಕ್ಕೆ ವೈಟ್ವಾಸ್ ಮಾಡಿರುವ ದತ್ ಅವರ ಬಯೋಪಿಕ್ ‘ಸಂಜು’ವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಜಯ್ ದತ್ ಅವರ ಬದುಕಿನ ಕಳಂಕಿತ ಭಾಗವಾದ 1993ರ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಶಸ್ತ್ರಾಸ್ತ್ರ ಹೊಂದಿದ ಅಪರಾಧದಲ್ಲಿ ಜೈಲು ಶಿಕ್ಷೆ ಅನುಭವಿಸಿರುವುದು, ಮಾದಕ ವ್ಯಸನ, ಹಲವು ಸಂಬಂಧಗಳ ಬಗ್ಗೆ ಚಲನಚಿತ್ರ ಯಾವುದೇ ಬೆಳಕು ಚೆಲ್ಲಿಲ್ಲ ಎಂದು ಅದು ಹೇಳಿದೆ.
ಪತ್ರಿಕೆಯ ಲೇಖನದಲ್ಲಿ ಸಂಜಯ್ ದತ್ರನ್ನು ‘ಅಪರಾಧಿ’ ಎಂದು ಕರೆಯಲಾಗಿದ್ದು, ರಣಬೀರ್ ಕಪೂರ್ ನಟನೆಯ, ಬಿಡುಗಡೆಯಾದ ಎರಡೇ ವಾರದಲ್ಲಿ 300 ಕೋ. ರೂ. ಸಂಗ್ರಹಿಸಿದ ನಿರ್ದೇಶಕ ರಾಜ್ಕುಮಾರ್ ಹಿರಾನಿ ಚಿತ್ರದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಸುನೀಲ್ ದತ್ ಹಾಗೂ ನಗ್ರಿಸ್ ದತ್ ಅವರ ಪುತ್ರನಾದ ಸಂಜಯ್ ದತ್ ಮಾದರಿ ವ್ಯಕ್ತಿಗೆ ಇರಬೇಕಾದ ಅರ್ಹತೆ ಇದೆಯೇ ಎಂದು ಲೇಖನದಲ್ಲಿ ಪ್ರಶ್ನಿಸಲಾಗಿದೆ. ಒಂದು ವೇಳೆ ಚಿತ್ರ ಸಂಗ್ರಹಿಸುತ್ತಿರುವ ಹಣದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವುದಾದರೆ, ಭಾರತದ ಸಿನೆಮಾದ ಅತ್ಯುಚ್ಛ ನೈತಿಕ ನೆಲೆ ಈಗ ಮಣ್ಣು ಮುಕ್ಕಿದಂತೆ ಕಾಣುತ್ತಿದೆ ಎಂದು ಲೇಖನದಲ್ಲಿ ಹೇಳಲಾಗಿದೆ.