ಗೋರಕ್ಷಣೆಗಾಗಿ ಗುಂಪು ಹತ್ಯೆಗಳು ನಡೆಯುವಾಗ ಹೃದಯ ಒಡೆಯುತ್ತದೆ: ಕಂಗನಾ
ಹೊಸದಿಲ್ಲಿ, ಆ.9: ಗೋವನ್ನು ರಕ್ಷಿಸುವ ಅಗತ್ಯವಿದೆಯಾದರೂ ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಗುಂಪು ಥಳಿತ ಪ್ರಕರಣಗಳು `ತಪ್ಪು' ಹಾಗೂ ದೇಶದಲ್ಲಿನ ವಿಷಾದನೀಯ ಪರಿಸ್ಥಿತಿಯನ್ನು ಸೂಚಿಸುತ್ತದೆ ಎಂದು ಬಾಲಿವುಡ್ ನಟಿ ಕಂಗನಾ ರಾನೌತ್ ಹೇಳಿದ್ದಾರೆ.
ಮಂಬೈಯಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರ ಜತೆ ಸಂವಾದವೊಂದರಲ್ಲಿ ಕಂಗನಾ ಮೇಲಿನಂತೆ ಹೇಳಿದ್ದಾರೆ. “ಒಂದು ವಿಧದ ಸಂಘರ್ಷ ಸ್ಥಿತಿಯಿದೆ. ಪ್ರಾಣಿಗಳನ್ನು ರಕ್ಷಿಸಬೇಕಿದೆ, ಆದರೆ ಗುಂಪು ಥಳಿತ ಪ್ರಕರಣಗಳು ನಡೆಯುವುದನ್ನು ನೋಡಿದಾಗ ಹೃದಯ ಒಡೆಯುತ್ತದೆ. ಇದು ತಪ್ಪೆಂದು ಅನಿಸುತ್ತದೆ'' ಎಂದು ಗುಂಪು ಥಳಿತಗಳ ಬಗ್ಗೆ ಕೇಳಿದಾಗ ಕಂಗನಾ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಹೊಸ ಚಲನಚಿತ್ರ `ಮಣಿಕರ್ಣಿಕ' ಬಗ್ಗೆ ಮಾತನಾಡಿದ ಆಕೆ ``ಚಿತ್ರದಲ್ಲಿ ಲಕ್ಷ್ಮೀಬಾಯಿ ಕರುವೊಂದನ್ನು ರಕ್ಷಿಸುವ ಚಿತ್ರಣವಿದೆ. ಚಿತ್ರ ತಂಡದ ನಡುವೆ ಚರ್ಚೆ ನಡೆದು ಚಿತ್ರೀಕರಣ ನಿಲ್ಲಿಸಲಾಯಿತು. ``ನಮಗೆ ಕರುವನ್ನು ರಕ್ಷಿಸಲು ಸಾಧ್ಯವಿಲ್ಲ, ನಾವು ಗೋ ರಕ್ಷಕರಂತೆ ಕಾಣುವುದು ಬೇಡ ಎಂದು ಅವರು ಹೇಳಿದರು'' ಎಂದು ಕಂಗನಾ ವಿವರಿಸಿದ್ದಾರೆ.
``ಇಂತಹ ಒಂದು ಪೂರ್ವಾಗ್ರಹ ಇರುವಾಗ ಜನರು ತಮ್ಮ ಬಗ್ಗೆ ಹಾಗೂ ತಾವು ನಂಬಿರುವ ಮೌಲ್ಯಗಳ ಬಗ್ಗೆ ತುಂಬಾ ಯೋಚಿಸುತ್ತಾರೆ. ಗೋವಿನ ರಕ್ಷಣೆ ಮಾಡಬೇಕೆನ್ನುವ ತುಡಿತ ಸರಿ, ಆದರೆ ಅದಕ್ಕಾಗಿ ಗುಂಪು ಥಳಿತದಂತಹ ಘಟನೆಗಳು ನಡೆದಾಗ ನಾವು ಮೂರ್ಖರಂತೆ ಕಾಣುತ್ತೇವೆ''ಎಂದರು ಕಂಗನಾ.
ಸುಧಾರಣಾವಾದಿಗಳ ಬಗ್ಗೆಯೂ ಕಂಗನಾ ಕಿಡಿಕಾರಿದ್ದು ಇಂತಹ ಜನರು ತಾವು ದ್ವೇಷಿಸುವ ಮಂದಿಯನ್ನು ದ್ವೇಷಿಸುವ ಇತರರನ್ನು ಮಾತ್ರ ತಮ್ಮ ಗುಂಪಿಗೆ ಸೇರಿಸುತ್ತಾರೆ ಎಂದರು.