ಅಕ್ಟೋಬರ್ 31ರಂದು ಜಗತ್ತಿನ ಅತ್ಯಂತ ಎತ್ತರದ ಸರ್ದಾರ್ ವಲ್ಲಭ ಬಾಯಿ ಪಟೇಲ್ ಪ್ರತಿಮೆ ಲೋಕಾರ್ಪಣೆ
ಹೊಸದಿಲ್ಲಿ, ಸೆ.9: ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆಯೆಂದು ವ್ಯಾಖ್ಯಾನಿಸಲಾಗುತ್ತಿರುವ ಗುಜರಾತ್ನಲ್ಲಿ ನಿರ್ಮಿಸಲಾಗಿರುವ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಪ್ರತಿಮೆಯನ್ನು ಪ್ರಧಾನಿ ಮೋದಿ ಅಕ್ಟೋಬರ್ 31ರಂದು ಅನಾವರಣಗೊಳಿಸಲಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಹಿನ್ನೆಲೆಯಲ್ಲಿ ಮಾತನಾಡಿದ ರೂಪಾನಿ, 182 ಮೀಟರ್ ಎತ್ತರದ ಪ್ರತಿಮೆಯು ದೇಶದ ಏಕತೆ ಮತ್ತು ಸಮಗ್ರತೆಯ ಚಿಹ್ನೆಯಾಗಿದೆ ಎಂದು ಅಭಿಪ್ರಾಯಿಸಿದ್ದಾರೆ. ಗುಜರಾತ್ ಸರಕಾರ ಈ ಪ್ರತಿಮೆಯನ್ನು ಏಕತೆಯ ಪ್ರತಿಮೆ ಎಂದು ಬಣ್ಣಿಸಿದ್ದು ಸರ್ದಾರ ವಲ್ಲಭ ಬಾಯಿ ಪಟೇಲ್ ಅವರ ಜನ್ಮದಿನಾಚರಣೆಯಂದು ಲೋಕಾರ್ಪಣೆಗೊಳಿಸುವುದಾಗಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಗುಜರಾತ್ನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 2013ರಲ್ಲಿ ಈ ಪ್ರತಿಮೆಯನ್ನು ನಿರ್ಮಿಸುವ ಘೋಷಣೆ ಮಾಡಿದ್ದರು. ಅದನ್ನು ನಿರ್ಮಿಸಲು ದೇಶದ ಉದ್ದಗಲದಿಂದ ಕಬ್ಬಿಣ, ಮಣ್ಣು ಮತ್ತು ನೀರನ್ನು ಸಂಗ್ರಹಿಸಿ ತರಲಾಗಿತ್ತು ಎಂದು ರೂಪಾನಿ ನೆನಪಿಸಿಕೊಂಡರು. ಮೋದಿಯವರು ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆಯನ್ನು ನಿರ್ಮಿಸುವ ಮಾತನ್ನಾಡಿದಾಗ ವಿಪಕ್ಷಗಳು ಅದು ಕೇವಲ ಪೊಳ್ಳು ಮಾತು ಎಂದು ನಿರ್ಲಕ್ಷಿಸಿದ್ದವು. ಆದರೆ ಇದೀಗ ಅವರ ಮುಂದೆ ಭವ್ಯ ಪ್ರತಿಮೆ ಎದ್ದು ನಿಂತಿದೆ ಎಂದು ರುಪಾನಿ ತಿಳಿಸಿದ್ದಾರೆ.