ಪೊಲೀಸ್ ಠಾಣೆ ಮೇಲೆ ಉಗ್ರರ ದಾಳಿ; ಓರ್ವ ಪೊಲೀಸ್ ಅಧಿಕಾರಿ ಹುತಾತ್ಮ
ಶ್ರೀನಗರ, ಸೆ.30: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಪೊಲೀಸ್ ಠಾಣೆಯೊಂದರ ಮೇಲೆ ಉಗ್ರರು ದಾಳಿ ನಡೆಸಿ ಓರ್ವ ಪೊಲೀಸ್ ಅಧಿಕಾರಿಯನ್ನುಗಂಭೀರ ಗಾಯಗೊಳಿಸಿದ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಉಗ್ರರು ಪೊಲೀಸ್ ಠಾಣೆಯ ಮೇಲೆ ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ ಪೊಲೀಸ್ ಅಧಿಕಾರಿ ಸಾಕಿಬ್ ಅಹ್ಮದ್ ಮಿರ್ (23) ಎಂಬವರು ಗಂಭೀರ ಗಾಯಗೊಂಡರು. ಅವರನ್ನು ಶೋಪಿಯಾನ್ ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನವನ್ನು "ಮೌಖಿಕ ದ್ವಂದ್ವಾರ್ಥತೆಯಿಂದ ದುಷ್ಪರಿಣಾಮ ಬೀರಲು ಪ್ರಯತ್ನಿಸುತ್ತಿದೆ" ಎಂದು ಆರೋಪಿಸಿ, ಪಾಕಿಸ್ತಾನದ ಮುಖಂಡರೊಂದಿಗೆ ಸಭೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡ 12 ಗಂಟೆಗಳ ಬಳಿಕ ದಾಳಿ ನಡೆದಿದೆ.
ಭಾರತ ಮಾತುಕತೆ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿದೆ ಎಂದು ಆರೋಪಿಸಲಾಗಿದೆ. ಇದು ಸಂಪೂರ್ಣ ಸುಳ್ಳು. ಚರ್ಚೆಗಳು ಹೆಚ್ಚು ಸಂಕೀರ್ಣವಾದ ವಿವಾದಗಳನ್ನು ಪರಿಹರಿಸುವ ಏಕೈಕ ವಿಧಾನವೆಂದು ನಾವು ನಂಬುತ್ತೇವೆ. ಪಾಕಿಸ್ತಾನದೊಂದಿಗಿನ ಮಾತುಕತೆಗಳು ಅನೇಕ ಬಾರಿ ಪ್ರಾರಂಭವಾಗಿವೆ. ಆದರೆ ಅದು ಪಾಕಿಸ್ತಾನದ ನಡವಳಿಕೆಯಿಂದಾಗಿ ಅರ್ಧದಲ್ಲಿ ನಿಂತಿದೆ. ಎಂದು ನ್ಯೂಯಾರ್ಕ್ ನಲ್ಲಿ ಶನಿವಾರ ಸಚಿವೆ ಸುಷ್ಮಾ ಸ್ವರಾಜ್ ಅವರು ಯು ಎನ್ ಜಿಸಿ 73 ನೇ ಅಧಿವೇಶನದಲ್ಲಿ ನೀಡಿದ ತಮ್ಮ ಭಾಷಣದಲ್ಲಿ ಹೇಳಿದ್ದರು.
ಜಮ್ಮು-ಕಾಶ್ಮೀರದ ವಿಶೇಷ ಅಧಿಕಾರಿಗಳನ್ನು ಪಾಕಿಸ್ತಾನ ಮೂಲದ ಉಗ್ರರ ಸಂಘಟನೆಗಳು ಅಪಹರಿಸಿ ಕೊಲೆ ಮಾಡಿರುವ ಬಳಿಕ ಎಂದು ಭಾರತ ಪಾಕಿಸ್ತಾನದೊಂದಿಗೆ ಮಾತುಕತೆಯನ್ನು ನಿಲ್ಲಿಸಿದೆ ಎಂದರು.