ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮುಳುಗಿಸುತ್ತಿರುವ ಕೇಸರಿ ಪಕ್ಷದ ಸಿದ್ಧಾಂತ
ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ
ಹೊಸದಿಲ್ಲಿ, ಅ.4: “ಭಾರತೀಯ ಜನತಾ ಪಕ್ಷಕ್ಕೆ ರಾಷ್ಟ್ರ ಮಟ್ಟದಲ್ಲಿ ಯಶಸ್ಸು ದೊರೆತಿಲ್ಲ. ಬದಲಾಗಿ ಅದರ ಯಶಸ್ಸು ಪ್ರಾಂತೀಯವಾಗಿದೆ'' ಎಂದು ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಹೇಳಿದ್ದಾರೆ. ಕೇಸರಿ ಪಕ್ಷದ ಸಿದ್ಧಾಂತವು ವೈವಿಧ್ಯತೆ ಮತ್ತು ಸರ್ವರನ್ನೊಳಗೊಂಡ ಪರಿಕಲ್ಪನೆಯ ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮುಳುಗಿಸಲು ಯತ್ನಿಸುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
“ರೈಸ್ ಆಫ್ ಸ್ಯಾಫ್ರನ್ ಪವರ್ : ರಿಫ್ಲೆಕ್ಷನ್ಸ್ ಆನ್ ಇಂಡಿಯನ್ ಪಾಲಿಟಿಕ್ಸ್'' ಎಂಬ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, “ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಸರಕಾರ ತನ್ನ ಆರ್ಥಿಕ ನೀತಿಗಳಲ್ಲಿ ವಿಫಲವಾಗಿದೆ. ಇದು ರೈತರ, ವಿದ್ಯಾರ್ಥಿಗಳ ಹಾಗೂ ನಿರುದ್ಯೋಗಿ ಯುವಜನತೆಯ ಹೆಚ್ಚುತ್ತಿರುವ ಸಮಸ್ಯೆಗಳಲ್ಲಿ ಅಭಿವ್ಯಕ್ತವಾಗುತ್ತಿದೆ'' ಎಂದು ಹೇಳಿದರು.
``ಸಮಕಾಲೀನ ಭಾರತೀಯ ರಾಜಕಾರಣದಲ್ಲಿರುವ ಎಲ್ಲರೂ ಓದಲೇ ಬೇಕಾದ ಪುಸ್ತಕವಿದು'' ಎಂದು ಅವರು ಲೇಖಕ ಮುಜೀಬುರ್ರಹ್ಮಾನ್ ರನ್ನು ಶ್ಲಾಘಿಸಿದರು.
ಸಿಪಿಐ ನಾಯಕ ಡಿ ರಾಜಾ ಮಾತನಾಡುತ್ತಾ, ``ದೇಶವು ಕೇವಲ ಆರ್ಥಿಕ ಅಥವಾ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿಲ್ಲ, ಬದಲಾಗಿ ಸೈದ್ಧಾಂತಿಕ ಹಾಗೂ ತತ್ವಾಧರಿತ ಬಿಕ್ಕಟ್ಟು ಎದುರಿಸುತ್ತಿದೆ'' ಎಂದು ಹೇಳಿದರು.