ಅ. 7ರಂದು ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಭಾರೀ ಮಳೆ: ರೆಡ್ ಅಲರ್ಟ್ ಘೋಷಣೆ
ಚೆನ್ನೈ, ಅ. 5: ಅಕ್ಟೋಬರ್ 7ರಂದು ತಮಿಳುನಾಡು, ಕೇರಳ ಹಾಗೂ ಪುದುಚೇರಿಯಲ್ಲಿ ಗುರುವಾರ ರೆಡ್ ಅಲರ್ಟ್ ಘೋಷಿಸಿರುವ ಭಾರತ ಹವಾಮಾನ ಇಲಾಖೆ, ಅರೇಬಿಯನ್ ಸಮುದ್ರದಲ್ಲಿ ಬೀಸುವ ಚಂಡ ಮಾರುತದ ಕಾರಣಕ್ಕೆ ದುರ್ಗಮ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದಿದೆ.
ಭಾರತ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಅಕ್ಟೋಬರ್ 5ರಂದು ಅರೇಬಿಯನ್ ಸಮುದ್ರದಲ್ಲಿ ನಿಮ್ನ ಒತ್ತಡ ರೂಪುಗೊಳ್ಳಲಿದೆ. ಇದು ಚಂಡಮಾರುತವನ್ನು ಬಲಿಷ್ಠಗೊಳಿಸಲಿದೆ ಹಾಗೂ ಓಮನ್ ಕರಾವಳಿಯತ್ತ ಚಲಿಸಲಿದೆ. ‘‘ಶುಕ್ರವಾರ ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ನಿಮ್ನ ಒತ್ತಡ ಸೃಷ್ಟಿಯಾಗುವ ಸಾಧ್ಯತೆ ಇದೆ. ಇದು ಚಂಡಮಾರುತವನ್ನು ತೀವ್ರಗೊಳಿಸಲಿದೆ. ಮುಂದಿನ ಮೂರು ದಿನಗಳಲ್ಲಿ ತಮಿಳುನಾಡು ಹಾಗೂ ಪುದುಚೇರಿಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ.’’ ಎಂದು ಹವಾಮಾನ ಇಲಾಖೆಯ ಉಪ ಪ್ರಧಾನ ನಿರ್ದೇಶಕ ಎಸ್. ಬಾಲಚಂದ್ರನ್ ತಿಳಿಸಿದ್ದಾರೆ. ದಕ್ಷಿಣ ಕೇರಳದ ಕರಾವಳಿ, ಲಕ್ಷದ್ವೀಪ ಪ್ರದೇಶ, ಕೊಮೊರಿನ್ ಪ್ರದೇಶ, ಆಗ್ನೇಯ ಅರೇಬಿಯನ್ ಸಮುದ್ರ, ಕೇಂದ್ರ ಅರೇಬಿಯನ್ ಸಮುದ್ರದಲ್ಲಿ ಅಕ್ಟೋಬರ್ 8ರ ವರೆಗೆ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.