ಪುಲ್ವಾಮ: ಉಗ್ರರಿಂದ ಪೊಲೀಸ್ ಅಧಿಕಾರಿಯ ಅಪಹರಿಸಿ ಹತ್ಯೆ
ತಂದೆ-ತಾಯಿಯ ಭೇಟಿಗೆ ತೆರಳಿದ್ದ ಇಮ್ತಿಯಾಝ್ ಅಹ್ಮದ್
ಹೊಸದಿಲ್ಲಿ, ಅ.28: ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿಯೊಬ್ಬರನ್ನು ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ಹತ್ಯೆಗೈದಿರುವ ಬಗ್ಗೆ ವರದಿಯಾಗಿದೆ. ಮೃತಪಟ್ಟವರನ್ನು ಇಮ್ತಿಯಾಝ್ ಅಹ್ಮದ್ ಮಿರ್ ಎಂದು ಗುರುತಿಸಲಾಗಿದೆ. ವಾಹಿಬಗ್ ನಲ್ಲಿ ಇಮ್ತಿಯಾಝ್ ರಿಗೆ ಗುಂಡಿಕ್ಕುವ ಮೊದಲು ಅವರನ್ನು ಅಪಹರಿಸಲಾಗಿತ್ತು.
ತನ್ನ ಗ್ರಾಮದಲ್ಲಿ ತನಗಾಗಿ ಉಗ್ರರು ಹುಡುಕಾಡುತ್ತಿದ್ದಾರೆ ಎನ್ನುವ ಮಾಹಿತಿಯಿದ್ದರೂ ತಂದೆ ತಾಯಿಯನ್ನು ಭೇಟಿಯಾಗಲು ಅವರು ತೆರಳಿದ್ದರು. ತನ್ನ ಗ್ರಾಮಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದವರು ಹತಾಶರಾಗಿದ್ದರು ಎಂದು ಅವರ ಸಹೋದ್ಯೋಗಿಯೊಬ್ಬರು ಮಾಹಿತಿ ನೀಡಿದ್ದಾರೆ. ತನ್ನ ಗುರುತನ್ನು ಬದಲಿಸಲು ಅವರನ್ನು ಗಡ್ಡ ಬೋಳಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ,
ಉಗ್ರರಿಂದ ದಾಳಿ ನಡೆಯುವ ಸಾಧ್ಯತೆಯಿರುವುದರಿಂದ ಗ್ರಾಮಕ್ಕೆ ತೆರಳದಂತೆ ಇಮ್ತಿಯಾಝ್ ರಿಗೆ ಎಚ್ಚರಿಕೆ ನೀಡಲಾಗಿತ್ತು. “ಅಲ್ಲಿಗೆ ಹೋಗಬೇಡ, ಉಗ್ರರ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ನಾನು ಹೇಳಿದ್ದೆ. ಆದರೆ ಪೋಷಕರನ್ನು ಭೇಟಿಯಾಗಲು ಆತ ತೆರಳಿದ್ದ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.