ಬಿಜೆಪಿ ಬಳಿ ರಾಮ ಮಂದಿರದ ಪೇಟೆಂಟ್ ಇಲ್ಲ: ಉಮಾ ಭಾರತಿ
ಪಕ್ಷದ ವಿರುದ್ಧವೇ ಕಿಡಿಕಾರಿದ ಹಿರಿಯ ನಾಯಕಿ
ಹೊಸದಿಲ್ಲಿ, ನ.26: ತಾನು ರಾಮ ಜನ್ಮಭೂಮಿ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರಿಂದ ರಾಮ ಮಂದಿರ ನಿರ್ಮಾಣ ತನ್ನ ಕನಸು ಎಂದು ಈ ಹಿಂದೆ ಹೇಳಿಕೊಂಡಿದ್ದ ಹಿರಿಯ ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಉಮಾ ಭಾರತಿ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯ ಅಯೋಧ್ಯೆ ಭೇಟಿಯನ್ನು ಬೆಂಬಲಿಸಿದ್ದಾರೆ. “ಹೌದು ಠಾಕ್ರೆ ಪ್ರಯತ್ನವನ್ನು ನಾನು ಮೆಚ್ಚುತ್ತೇನೆ. ರಾಮ ಮಂದಿರದ ಮೇಲೆ ಬಿಜೆಪಿಗೆ ಪೇಟೆಂಟ್ ಇಲ್ಲ. ಶ್ರೀ ರಾಮ ಎಲ್ಲರಿಗೂ ದೇವರು'' ಎಂದು ಸುದ್ದಿ ಸಂಸ್ಥೆ ಜತೆ ಮಾತನಾಡುತ್ತಾ ಉಮಾ ಭಾರತಿ ಹೇಳಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಬೆಂಬಲಿಸುವಂತೆ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಅಕಾಲಿ ದಳ, ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಉವೈಸಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ ಅವರಿಗೆ ಉಮಾ ಭಾರತಿ ಮನವಿ ಮಾಡಿದ್ದಾರೆ.
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಿ ಬಿಜೆಪಿಯ ಅಯೋಧ್ಯ ಅಜೆಂಡಾವನ್ನು ಹೈಜಾಕ್ ಮಾಡುತ್ತಿದ್ದಾರೆಂದು ಬಿಜೆಪಿಯ ಇಬ್ಬರು ನಾಯಕರಾದ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹಾಗೂ ಬಲ್ಲಿಯಾ ಶಾಸಕ ಸುರೇಂದ್ರ ಸಿಂಗ್ ಹೇಳಿಕೆ ನೀಡಿದ ಬೆನ್ನಲ್ಲೇ ಉಮಾ ಭಾರತಿ ಶಿವಸೇನೆಗೆ ಬೆಂಬಲ ವ್ಯಕ್ತಪಡಿಸಿರುವುದು ಸಾಕಷ್ಟು ಕುತೂಹಲಕ್ಕೆಡೆ ಮಾಡಿ ಕೊಟ್ಟಿದೆ.