ಕೇರಳ ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಚರ್ಚ್ನಿಂದ ಆರೋಪಿಯ ವೈಭವೀಕರಣ: ಎನ್ಸಿಡಬ್ಲ್ಯು
ಕೊಚ್ಚಿ, ಡಿ. 2: ಜಲಂಧರ್ನ ಬಿಷಪ್ ಫ್ರಾಂಕೊ ಮುಳಕ್ಕಲ್ನಿಂದ ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಆರೋಪಿಸಲಾದ ಕ್ರೈಸ್ತ ಸನ್ಯಾಸಿನಿಯ ಹಿತಾಸಕ್ತಿಯನ್ನು ಕೆಥೋಲಿಕ್ ಚರ್ಚ್ ರಕ್ಷಿಸುತ್ತಿಲ್ಲ ಎಂದು ಮಹಿಳೆಯರ ರಾಷ್ಟ್ರೀಯ ಆಯೋಗ (ಎನ್ಸಿಡಬ್ಲ್ಯು) ಆರೋಪಿಸಿದೆ.
ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಆರೋಪದಲ್ಲಿ ಬಂಧಿತರಾಗಿರುವ ಬಿಷಪ್ ಅವರನ್ನು ವೈಭವೀಕರಿಸುವ ಪ್ರಕ್ರಿಯೆಯಲ್ಲಿ ಚರ್ಚ್ ತೊಡಗಿಕೊಂಡಿದೆ ಎಂದು ಎನ್ಸಿಡಬ್ಲ್ಯು ಅಧ್ಯಕ್ಷೆ ರೇಖಾ ಶರ್ಮಾ ಆರೋಪಿಸಿದ್ದಾರೆ.
ಹಲವು ಕ್ರೈಸ್ತ ಸನ್ಯಾಸಿನಿಯರು ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ರೂಪಿಸುವಂತೆ ತಾನು ನೀಡಿದ ನಿರ್ದೇಶನ ಅನುಷ್ಠಾನಗೊಳಿಸದ ಚರ್ಚ್ ಅನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಚರ್ಚ್ಗಳಲ್ಲಿ ಯಾವುದೇ ಆಂತರಿಕ ದೂರು ಸಮಿತಿ ಇಲ್ಲ. ಚರ್ಚ್ಗಳಲ್ಲಿ ಇಂತಹ ವ್ಯವಸ್ಥೆ ಇಲ್ಲದೇ ಇರುವುದರಿಂದ ಜಲಂ ಧರ್ ಬಿಷಪ್ ವಿರುದ್ಧ ದೂರು ನೀಡಿದ ಕ್ರೈಸ್ತ ಸನ್ಯಾಸಿನಿಯಂತವರಿಗೆ ಯಾವುದೇ ರೀತಿಯ ನ್ಯಾಯ ಸಿಗುವುದಿಲ್ಲ ಎಂದು ಶರ್ಮಾ ಹೇಳಿದ್ದಾರೆ.
ಆಕೆ (ಸಂತ್ರಸ್ತ) ದೂರು ನೀಡಲು ವ್ಯಕ್ತಿಯೇ ಇರಲಿಲ್ಲ. ಮಹಿಳೆಯರು ದೂರು ನೀಡಲು ಆಂತರಿಕ ದೂರು ಸಮಿತಿ ರೂಪಿಸುವಂತೆ ಒತ್ತಾಯಿಸಿ ನಾವು ಚರ್ಚ್ಗೆ ಪತ್ರ ಕೂಡ ಬರೆದಿದ್ದೇವೆ ಎಂದು ಅವರು ಹೇಳಿದರು.
ಕೊಟ್ಟಾಯಂ ಜಿಲ್ಲೆಯ ಕುರವಿಲಂಗಾಡುನಲ್ಲಿ ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಸೆಪ್ಟಂಬರ್ನಲ್ಲಿ ಜಲಾಂಧರ್ ಡಯಾಸಿಸ್ನ ಬಿಷಪ್ ಮುಳಕ್ಕಲ್ ಅವರನ್ನು ಬಂಧಿಸಲಾಗಿತ್ತು.