ಪಕ್ಷೇತರರಾಗಿ ಲೋಕಸಭೆಗೆ ಸ್ಪರ್ಧಿಸಲಿರುವ ಪ್ರಕಾಶ್ ರೈ
ಬೆಂಗಳೂರು,ಜ.1: ರಜನಿಕಾಂತ್ ಹಾಗೂ ಕಮಲ ಹಾಸನ್ ಬಳಿಕ ದಕ್ಷಿಣ ಭಾರತದ ಪ್ರಸಿದ್ಧ ನಟ ಪ್ರಕಾಶ್ ರೈ ಕೂಡ ರಾಜಕೀಯ ರಂಗಕ್ಕೆ ಧುಮಕಲು ನಿರ್ಧರಿಸಿದ್ದಾರೆ.
ಹೊಸ ವರ್ಷದಲ್ಲಿ ಟ್ವೀಟ್ ಮಾಡಿದ ರೈ, ಮುಂಬರುವ 2019ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದಾರೆ.
‘‘ಪ್ರತಿಯೊಬ್ಬರಿಗೂ ಹೊಸ ವರ್ಷದ ಶುಭಾಶಯಗಳು...ಹೊಸ ಆರಂಭ...ಹೆಚ್ಚಿನ ಹೊಣೆಗಾರಿಕೆ...ನಿಮ್ಮೆಲ್ಲರ ಬೆಂಬಲದಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತೇನೆ. ಸ್ಪರ್ಧಿಸುವ ಕ್ಷೇತ್ರದ ವಿವರವನ್ನು ಶೀಘ್ರವೇ ಬಹಿರಂಗಪಡಿಸುವೆ. ಅಬ್ ಕಿ ಬಾರ್ ಜನತಾ ಕಿ ಸರ್ಕಾರ್, ಜನರ ಧ್ವನಿಯನ್ನು ಸಂಸತ್ತಿನಲ್ಲೂ ಕೇಳುತ್ತೇನೆ’’ ಎಂದು ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
ತನ್ನ ಸ್ನೇಹಿತೆ ಕನ್ನಡ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ಬಳಿಕ ರೈ ಅವರು ನರೇಂದ್ರ ಮೋದಿ ಸರಕಾರ ವಿರುದ್ಧ ಧ್ವನಿ ಎತ್ತುತ್ತಾ ಬಂದಿದ್ದರು. ರೈ ಟ್ವಿಟರ್ನಲ್ಲಿ ರಾಜಕೀಯ ಪ್ರವೇಶದ ಘೋಷಣೆ ಮೊಳಗಿಸಿದ ಬೆನ್ನಿಗೇ ಅಭಿನಂದನೆಗಳ ಸುರಿಮಳೆಯಾಗಿದ್ದು, ರಾಜಕೀಯ ಜೀವನ ಶುಭವಾಗಲಿ ಎಂದು ಹಾರೈಸಿದ್ದಾರೆ. ರೈ ಟ್ವೀಟ್ ಮಾಡಿ ಒಂದು ಗಂಟೆಯೊಳಗೆ 1,000ಕ್ಕೂ ಅಧಿಕ ಲೈಕ್ಗಳು ಬಂದಿವೆ.