ರಸ್ತೆ ಅಪಘಾತ: 10 ಶಬರಿಮಲೆ ಯಾತ್ರಿಕರು ಮೃತ್ಯು
ಚೆನ್ನೈ, ಜ.6: ತಮಿಳುನಾಡಿನ ತಿರುಮಯಂ ಬಳಿ ನಡೆದ ರಸ್ತೆ ಅಪಘಾತದಲ್ಲಿ 10 ಶಬರಿಮಲೆ ಯಾತ್ರಿಕರು ಸಾವನ್ನಪ್ಪಿದ್ದಾರೆ. ಕೇರಳದ ಶಬರಿಮಲೆ ದೇವಸ್ಥಾನಕ್ಕೆ ತೆರಳಿ ಊರಿಗೆ ವಾಪಸಾಗುತ್ತಿದ್ದ ತೆಲಂಗಾಣದ ಅಯ್ಯಪ್ಪ ಭಕ್ತರು ಪ್ರಯಾಣಿಸುತ್ತಿದ್ದ ವ್ಯಾನು ಕರೈಕುಡಿ-ಪುದುಕೊಟ್ಟೈ ರಸ್ತೆಯಲ್ಲಿ ಕಂಟೈನರ್ ಟ್ರಕ್ಗೆ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟೆಂಪೊ ಟ್ರಾವೆಲರ್ ವ್ಯಾನ್ ನಲ್ಲಿ 15 ಯಾತ್ರಿಕರಿದ್ದರು. ಶಬರಿಮಲೆ ದೇವಳಕ್ಕೆ ಭೇಟಿ ನೀಡಿ ರಾಮೇಶ್ವರ ಸಂದರ್ಶಿಸಿದ ಬಳಿಕ ಇವರು ತೆಲಂಗಾಣಕ್ಕೆ ವಾಪಸಾಗುತ್ತಿದ್ದಾಗ, ಎದುರು ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್ ಮುಖಾಮುಖಿ ಡಿಕ್ಕಿಯಾಗಿದೆ. 7 ಯಾತ್ರಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತರಾಗಿದ್ದಾರೆ. ಟ್ರಕ್ನ ಚಾಲಕ ಪರಾರಿಯಾಗಿದ್ದಾನೆ. ಮೃತಪಟ್ಟವರು ತೆಲಂಗಾಣದ ಮೇದಕ್ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
Next Story