ಲಿಖಿತ ಭಾಷಣವನ್ನೂ ಓದಲಾಗದೆ ಪರದಾಡಿದ ಮ.ಪ್ರದೇಶದ ಸಚಿವೆ!
ಗ್ವಾಲಿಯರ್,ಜ.26: ಮಧ್ಯಪ್ರದೇಶದ ಕಮಲನಾಥ ನೇತೃತ್ವದ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿರುವ ಇಮಾರ್ತಿ ದೇವಿ ಅವರು ಶನಿವಾರ ಇಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವದಲ್ಲಿ ಬರೆದು ಕೊಟ್ಟಿದ್ದ ಭಾಷಣವನ್ನೂ ಓದಲಾಗದೆ ಪರದಾಡಿದ್ದು,ಇದು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ತ್ರಿವರ್ಣ ಧ್ವಜಾರೋಹಣದ ಬಳಿಕ ಭಾಷಣದ ಕೆಲವು ಸಾಲುಗಳನ್ನು ಓದಿದ ಅವರು ಮುಂದಕ್ಕೆ ಓದಲಾಗದೇ ‘ಅಬ್ ಕಲೆಕ್ಟರ್ ಸಾಬ್ ಪಢೇಂಗೆ’ ಎಂದು ಹೇಳಿ ತನ್ನ ಕೈಯಲ್ಲಿದ್ದ ಲಿಖಿತ ಭಾಷಣವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿದರು. ಅವರ ರಕ್ಷಣೆಗೆ ಧಾವಿಸಿದ ಜಿಲ್ಲಾಧಿಕಾರಿ ಭರತ ಯಾದವ ಅವರು ಉಳಿದ ಭಾಷಣವನ್ನು ಓದಿ ಮುಗಿಸಿದರು.
ಈ ಕುರಿತ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತಾನು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದೆ,ಈ ಬಗ್ಗೆ ನೀವು ವೈದ್ಯರನ್ನು ಕೇಳಬಹುದು. ಇರಲಿ,ಜಿಲ್ಲಾಧಿಕಾರಿಗಳು ಭಾಷಣವನ್ನು ಸರಿಯಾಗಿ ಓದುತ್ತಾರೆ ಎಂದು ಇಮಾರ್ತಿ ದೇವಿ ಸ್ಥಳದಲ್ಲಿದ್ದ ಸುದ್ದಿಗಾರರಿಗೆ ಸಮಜಾಯಿಷಿ ನೀಡಿದರು.
ಮೂರನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿರುವ ಅವರು ಗ್ವಾಲಿಯರ್ ಯುವ ಕಾಂಗ್ರೆಸ್ ಸಮಿತಿಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದರು. ಡಿ.18ರಂದು ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿಯೂ ಅವರು ಕೆಲವು ಬಾರಿ ತಡಬಡಿಸಿದ್ದರು.