‘ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳದಂತೆ ಬಲವಂತವಾಗಿ ತಡೆಯಲಾಯಿತು’
ಐಎಎಸ್ ಅಧಿಕಾರಿಗಳ ಆರೋಪ
ಐಜ್ವಾಲ್, ಜ. 28: ಮಿಝೊರಾಂ ರಾಜಧಾನಿ ಐಜ್ವಾಲ್ನಲ್ಲಿ ನಡೆದ ಗಣರಾಜ್ಯೋತ್ಸವದ ಕಾರ್ಯಕ್ರದಲ್ಲಿ ಪಾಲ್ಗೊಳ್ಳದಂತೆ ನಮ್ಮನ್ನು ಬಲವಂತವಾಗಿ ತಡೆಯಲಾಯಿತು ಎಂದು ಪ್ರತಿಪಾದಿಸಿ ಇಬ್ಬರು ಐಎಎಸ್ ಅಧಿಕಾರಿಗಳು ಕೇಂದ್ರ ಸರಕಾರಕ್ಕೆ ಶನಿವಾರ ಪತ್ರ ಬರೆದಿದ್ದಾರೆ.
ನಾಗರಿಕ ತಿದ್ದುಪಡಿ ಮಸೂದೆ ವಿರೋಧಿಸುತ್ತಿರುವ ಸರಕಾರೇತರ ಸಂಸ್ಥೆಯ ಸಮನ್ವಯ ಸಮಿತಿ ಗಣರಾಜ್ಯೋತ್ಸವ ಕಾರ್ಯಕ್ರಮ ಬಹಿಷ್ಕರಿಸಿತ್ತು. ಇದು ನಾಗರಿಕ ಸಮಾಜದ ಗುಂಪು ಹಾಗೂ ವಿದ್ಯಾರ್ಥಿ ಸಂಘಟನೆಗಳನ್ನು ಒಳಗೊಂಡ ಒಕ್ಕೂಟ. ಬಹಿಷ್ಕಾರದ ಹಿನ್ನೆಲೆಯಲ್ಲಿ ಕೇವಲ ಸಚಿವರು, ಶಾಸಕರು ಹಾಗೂ ಸರಕಾರದ ಉನ್ನತ ಅಧಿಕಾರಿಗಳು ಮಾತ್ರ ಪಾಲ್ಗೊಂಡಿದ್ದರು. ಇದರಿಂದಾಗಿ ಮಿಝೊರಾಂನ ರಾಜ್ಯಪಾಲರು ಬಹುತೇಕ ಖಾಲಿಯಾಗಿದ್ದ ಮೈದಾನ ಉದ್ದೇಶಿಸಿ ಮಾತನಾಡಿದ್ದರು. ಮಿಝೊರಾಂನಲ್ಲಿ ಸಂಭವಿಸಿರುವುದು ‘ಮುಕ್ತ ದೇಶದಲ್ಲಿ ಚಿಂತಿಸಲು ಸಾಧ್ಯವಾಗದ ವಿಷಯ’ ಎಂದು ಕೋ-ಆಪರೇಟಿವ್ ಸೊಸೈಟಿಯ ಭೂಪೇಶ್ ಚೌಧುರಿ ತಿಳಿಸಿದ್ದಾರೆ.
ಪ್ರವೇಶ ದ್ವಾರದಲ್ಲಿ ನನ್ನನ್ನು ಹಾಗೂ ಇನ್ನೊಬ್ಬರು ಅಧಿಕಾರಿಯನ್ನು ಸರಕಾರೇತರ ಸಂಸ್ಥೆಯ ಸಮನ್ವಯ ಸಮಿತಿ ತಡೆಯಿತು ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ತಿಳಿಸಿತು. ಅಹಿತಕರ ಘಟನೆಗಳು ಸಂಭವಿಸುವುದಕ್ಕಿಂತ ಮುನ್ನ ಕೇಂದ್ರ ಕಚೇರಿಗೆ ಹಿಂದಿರುಗುವಂತೆ ಅವರು ತಿಳಿಸಿದ್ದಾರೆ ಎಂದಿದ್ದಾರೆ. ಕೇವಲ ಕಾರ್ಯದರ್ಶಿಗಳು ಹಾಗೂ ಅದಕ್ಕಿಂತ ಮೇಲಿನ ಶ್ರೇಣಿಯ ಅಧಿಕಾರಿಗಳು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ರಾಜ್ಯ ಸರಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಸರಕಾರೇತರ ಸಂಸ್ಥೆಯ ಪದಾಧಿಕಾರಿಗಳು ಪ್ರತಿಪಾದಿಸಿದ್ದಾರೆ ಎಂದು ಚೌಧುರಿ ತಿಳಿಸಿದ್ದಾರೆ.