ಹುತಾತ್ಮರಾದ ಯೋಧರ ಕುಟುಂಬಕ್ಕೆ ಇನ್ನೂ ಯಾವುದೇ ಸವಲತ್ತು ನೀಡಿಲ್ಲ ಬಿಜೆಪಿ ಸರಕಾರ: ಆರೋಪ
ಹೊಸದಿಲ್ಲಿ, ಮಾ.17: ಪುಲ್ವಾಮದಲ್ಲಿ ನಡೆದ ದಾಳಿಯಲ್ಲಿ ಯೋಧರು ಮೃತಪಟ್ಟಿರುವ ಘಟನೆಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿರುವ ಜಾರ್ಖಂಡ್ ಮುಕ್ತಿ ಮೋರ್ಛಾ(ಜೆಎಂಎಂ)ದ ಕಾರ್ಯಾಧ್ಯಕ್ಷ ಹೇಮಂತ್ ಸೊರೇನ್, ಮೃತದೇಹಗಳ ಮೇಲೆ ನಡೆಸುವ ರಾಜಕೀಯ ಓಟು ತರುವುದಿಲ್ಲ ಎಂದು ಹೇಳಿದ್ದಾರೆ.
ಮಹಾ ಮೈತ್ರಿಕೂಟದ ಕುರಿತು ಚರ್ಚಿಸಲು ದಿಲ್ಲಿಗೆ ಬಂದಿರುವ ಸೊರೇನ್, ಸರಕಾರ ತನ್ನ ಕೆಲಸ ಮಾಡಬೇಕು. ಸೇನಾಪಡೆಗಳಿಗೆ ಅವರ ಕೆಲಸ ಮಾಡಲು ಬಿಡಬೇಕು ಎಂದರು.
ಹಸಿವಿನಿಂದ ಜನ ಸಾಯುತ್ತಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಿರುದ್ಯೋಗದ ಸಮಸ್ಯೆ ಅಗಾಧವಾಗಿ ಬೆಳೆದಿದೆ. ಇವುಗಳಿಗೆಲ್ಲಾ ಉತ್ತರ ನೀಡದ ಬಿಜೆಪಿಯವರು ಓಟು ಸಂಪಾದಿಸಲು ಮೃತದೇಹದ ಮೇಲೆ ರಾಜಕೀಯ ನಡೆಸುತ್ತಿದ್ದಾರೆ ಎಂದು ಸುದ್ದಿಗಾರರ ಜೊತೆ ಮಾತನಾಡಿದ ಸೊರೇನ್ ಹೇಳಿದರು.
ಗಡಿಭಾಗದಲ್ಲಿ ಪ್ರತೀ ದಿನ ಯೋಧರು ಸಾಯುತ್ತಿದ್ದಾರೆ. ಇವರ ಬಗ್ಗೆ ಯೋಚಿಸದ ಬಿಜೆಪಿ ಸರಕಾರ ಇಂತಹ ಘಟನೆಯ ರಾಜಕೀಯ ಲಾಭ ಪಡೆಯಲು ಮುಂದಾಗಿದೆ. ಕರ್ತವ್ಯದಲ್ಲಿದ್ದಾಗ ಮೃತಪಟ್ಟಿರುವ ಜಾರ್ಖಂಡ್ನ ಯೋಧರ ಕುಟುಂಬಕ್ಕೆ ಇನ್ನೂ ಯಾವುದೇ ಸವಲತ್ತು ಒದಗಿಸಿಲ್ಲ . ಬಿಜೆಪಿ ಸರಕಾರದಡಿ ಜಾರ್ಖಂಡ್ನ ಅಭಿವೃದ್ಧಿ ಎಂಬುದು ಕೇವಲ ಕಾಗದದ ಮೇಲಿನ ಘೋಷಣೆಯಷ್ಟೇ. ಆದರೆ ವಾಸ್ತವವಾಗಿ ಯಾವ ಅಭಿವೃದ್ಧಿ ಕಾರ್ಯವೂ ನಡೆದಿಲ್ಲ ಎಂದು ಆರೋಪಿಸಿದರು.