ಬಾಲಕೋಟ್ ದಾಳಿಯ ಪುರಾವೆ ಸ್ಪಷ್ಟವಾಗಿದ್ದರೂ ಗಮನಿಸಲು ಪಾಕ್ ಸಿದ್ಧವಿಲ್ಲ: ಬಿಎಸ್ ಧನೋವಾ
ಹೊಸದಿಲ್ಲಿ, ಮಾ.30: ಬಾಂಬ್ ದಾಳಿಯಿಂದ ನೆಲಸಮವಾದ ಕಟ್ಟಡದ ರೂಪದಲ್ಲಿ ಸ್ಪಷ್ಟವಾದ ಪುರಾವೆಯಿದ್ದರೂ ಬಾಲಕೋಟ್ನಲ್ಲಿದ್ದ ಉಗ್ರರ ಶಿಬಿರದ ಮೇಲೆ ಫೆಬ್ರವರಿ 26ರಂದು ಭಾರತದ ವಾಯುಪಡೆ ನಡೆಸಿದ ದಾಳಿಯನ್ನು ಒಪ್ಪಿಕೊಳ್ಳಲು ಪಾಕಿಸ್ತಾನ ನಿರಾಕರಿಸುತ್ತಿದೆ ಎಂದು ಭಾರತದ ವಾಯಪಡೆಯ ಮುಖ್ಯಸ್ಥ ಬಿಎಸ್ ಧನೋವಾ ಹೇಳಿದ್ದಾರೆ.
ಭಾರತದ ಯುದ್ಧವಿಮಾನಗಳು ಉದ್ದೇಶಿತ ಗುರಿಯ ಮೇಲೆ ನಿಖರವಾಗಿ ದಾಳಿ ಮಾಡಿದ್ದು ಇದರಿಂದಾಗಿ ಕಟ್ಟಡದ ಛಾವಣಿಯಲ್ಲಿ 80ರಿಂದ 90 ಸೆ.ಮೀ. ವ್ಯಾಸದ ರಂಧ್ರಗಳಾಗಿವೆ. ಯಾವ ಕಡೆ ನೋಡಬೇಕು ಎಂದು ತಿಳಿದಿರುವ ವ್ಯಕ್ತಿಗಳಿಗೆ ಇದು ಕಾಣುತ್ತದೆ. ಆದರೆ ಸ್ವಯಂಸ್ಪಷ್ಟ ಪುರಾವೆಯನ್ನು ಗಮನಿಸದವರಿಗೆ ಇದು ಕಾಣಿಸದು ಎಂದು ಧನೋವಾ ಹೇಳಿದ್ದಾರೆ.
ಪುರಾವೆ ನಿಮ್ಮ ಕಣ್ಣೆದುರಿಗೇ ಇದೆ. ಆದರೆ ನಿಮಗೆ ಅದನ್ನು ನೋಡಲು ಇಷ್ಟವಿಲ್ಲ. ಒಬ್ಬ ಮನುಷ್ಯ ಇಲ್ಲ ಎಂದು ಎಷ್ಟು ಬಾರಿ ತಲೆ ಆಡಿಸಿದರೂ, ಸ್ವಯಂ ಸ್ಪಷ್ಟ ಪುರಾವೆಯಿದ್ದಾಗ ಇದೆಲ್ಲಾ ವ್ಯರ್ಥವಾಗುತ್ತದೆ ಎಂದವರು ಹೇಳಿದರು.
ವಾಯುದಾಳಿಯ ಬಗ್ಗೆ ಪ್ರಶ್ನಿಸಿರುವ ವಿಪಕ್ಷಗಳ ವಿರುದ್ಧ ಶುಕ್ರವಾರ ಒಡಿಶಾದ ಕೊರಾಪುಟ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದರು.